ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್ಸಿಡಿಸಿಸಿ ಬ್ಯಾಂಕ್) ವರದಿ ವರ್ಷದಲ್ಲಿ 79.09 ಕೋಟಿ ರೂ. ಲಾಭ ಗಳಿಸಿದ್ದು, ಬ್ಯಾಂಕ್ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ. ಇದು ಕಳೆದ ವರ್ಷದ ಲಾಭ (61.29 ಕೋಟಿ ರೂ.) ಕ್ಕಿಂತ ಶೇ.29.04 ಏರಿಕೆಯಾಗಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಸ್ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಒಟ್ಟು 15540.80 ಕೋಟಿ ರೂ. ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರ (13514.51 ಕೋಟಿ ರೂ.)ಕ್ಕಿಂತ ಈ ಬಾರಿ ಶೇ.14.99 ಏರಿಕೆಕಂಡಿದೆ.2024-25ನೇ ಸಾಲಿನಲ್ಲಿ 18,000.00 ಕೋಟಿ ರೂ.ವ್ಯವಹಾರದ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದು ಅವರು ಹೇಳಿದರು.
* 7221.37 ಕೋಟಿ ರೂ.ಠೇವಣಿ
ಎಸ್ಸಿಡಿಸಿಸಿ ಬ್ಯಾಂಕ್ ತನ್ನ 113 ಶಾಖೆಗಳ ಮೂಲಕ ಒಟ್ಟು 7221.37 ಕೋಟಿ ರೂ.ಠೇವಣಿ ಸಂಗ್ರಹಿಸಿದ್ದು, ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳ ಪೈಕಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಸಂಗ್ರಹಣೆಗಿಂತ ಈ ಬಾರಿ ಶೇ.13.33 ಏರಿಕೆಯಾಗಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ 2032.28 ಕೋಟಿ ರೂ., ಮಧ್ಯಮಾವಧಿ ಸಾಲ 136.99 ಕೋಟಿ ರೂ. ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು 2169.27 ಕೋಟಿ ರೂ.ಸಾಲ ನೀಡಲಾಗಿದ್ದು, ಕೃಷಿಯೇತರ ಕ್ಷೇತ್ರಕ್ಕೆ 4315.85 ಕೋಟಿ ಸಾಲ ನೀಡಲಾಗಿದೆ ವರದಿ ವರ್ಷದಲ್ಲಿ ನೀಡಿದ ಕೃಷಿ ಸಾಲಗಳು ಶೇ.100ರ ಮರು ಪಾವತಿಯಾಗಿದ್ದು, ಇಂತಹ ಸಾಧನೆಯನ್ನು ಕಳೆದ 29 ವರ್ಷಗಳಿಂದ ಬ್ಯಾಂಕ್ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ ಎಂದು ಅವರುವಿವರ ನೀಡಿದರು.
*ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್
ದ.ಕ.ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ ಹೊಂದಿರುವ ರೈತರಿಗೆ ಬ್ಯಾಂಕ್ ರುಪೇ ಕಿಸಾನ್ ಕಾರ್ಡ್ ನೀಡಿದೆ. ಈಗಾಗಲೇ 1,37,010 ರುಪೇ ಕಿಸಾನ್ ಕಾರ್ಡ್ಗಳನ್ನು ರೈತರಿಗೆ ವಿತರಿಸಲಾಗಿದೆ. 80,668 ರುಪೇ ಡೆಬಿಟ್ ಕಾರ್ಡ್ಗಳನ್ನು ಬ್ಯಾಂಕ್ನ ಇತರ ಗ್ರಾಹಕರಿಗೆ ನೀಡಲಾಗಿದೆ.
* ಬ್ಯಾಂಕಿನ ಸಾಧನೆ
ಬ್ಯಾಂಕಿಗೆ 21 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 19 ಬಾರಿ ನಬಾರ್ಡ್ ಪ್ರಶಸ್ತಿ ದೊರೆತಿದೆ. ಎರಡು ಬಾರಿ ಎಫ್ಸಿಬಿಎ ರಾಷ್ಟ್ರೀಯ
ಪ್ರಶಸ್ತಿ ಹಾಗೂ ಎರಡು ಬಾರಿ ಪ್ರತಿಷ್ಠಿತ ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ ಲಭಿಸಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಅಟಲ್ ಪಿಂಚಣಿ ಯೋಜನೆಯನ್ನು ಬ್ಯಾಂಕ್ ಸಮರ್ಪಕವಾಗಿ ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಚಂದಾದಾರರನ್ನು ನೋಂದಾಯಿಸಿದೆ. ವರದಿ ವರ್ಷದಲ್ಲಿ 2 ಬಾರಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದಿಂದ ಪ್ರಶಸ್ತಿಗೆ ಪಾತ್ರವಾಗಿದೆ. ಬ್ಯಾಂಕಿನ ಎಲ್ಲಾ ಶಾಖೆಗಳು ಸಂಪೂರ್ಣ ಗಣಕೀಕೃತಗೊಂಡು ಏಕಗವಾಕ್ಷಿ, ಆರ್.ಟಿ.ಜಿ.ಎಸ್/ ನೆಫ್ಟ್ ಹಾಗೂ ಕೋರ್ ಬ್ಯಾಂಕಿಂಗ್ನಂತಹ ಉತ್ಕೃಷ್ಟ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಬ್ಯಾಂಕಿನ 19 ಶಾಖೆಗಳು ಸಂಪೂರ್ಣ ಹವಾನಿಯಂತ್ರಿತವಾಗಿ
ಕಾರ್ಯನಿರ್ವಹಿಸುತ್ತಿವೆ ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದರು.
ವಿನಯ ಕುಮಾರ್ ಸೂರಿಂಜೆ, ಭಾಸ್ಕರ ಎಸ್.ಕೋಟ್ಯಾನ್, ಕೆ.ಹರಿಶ್ಚಂದ್ರ, ಟಿ.ಜಿ.ರಾಜಾರಾಮ ಭಟ್, ದೇವಿಪ್ರಸಾದ್ ಶೆಟ್ಟಿ ಬೆಳಪು,
ಅಶೋಕ್ ಕುಮಾರ್ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ರಾಜು ಪೂಜಾರಿ, ಎಂ.ಮಹೇಶ್ ಹೆಗ್ಡೆ, ಎಂ.ವಾದಿರಾಜ ಶೆಟ್ಟಿ, ಕುಶಾಲಪ್ಪ ಗೌಡ ಪಿ, ಎಸ್.ಎನ್.ಮನ್ಮಥ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಜೈರಾಜ್ ರೈ, ಎಸ್.ಬಿ.ಜಯರಾಮ ರೈ , ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ.ಭಟ್.ಕೆ. ಉಪಸ್ಥಿತರಿದ್ದರು.
110 ವರ್ಷಗಳ ಸಾರ್ಥಕ ಸೇವೆ
* ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಎನ್ನುವ ಆಶಯದೊಂದಿಗೆ ಸುಸಜ್ಜಿತ ವಾಹನದಲ್ಲಿ (ಬ್ಯಾಂಕ್ ಆನ್ ವ್ಹೀಲ್) ಎಲ್ಲ ರೀತಿಯ ಬ್ಯಾಂಕಿಂಗ್ ಸೇವೆಯನ್ನು ಹಾಗೂ ಎಟಿಎಂ ಸೌಲಭ್ಯವನ್ನು ಕಾರ್ಯರೂಪಕ್ಕೆ ತಂದ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಹೆಗ್ಗಳಿಕೆ. ಮಂಗಳೂರು ಹಾಗೂ ಉಡುಪಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯರೂಪದಲ್ಲಿದೆ.
* ಬ್ಯಾಂಕಿನ ಎಲ್ಲ ಶಾಖೆಗಳ ಭದ್ರತೆಯ ಹಿತದೃಷ್ಟಿಯಿಂದ ಸಿಸಿಟಿವಿ ಕೆಮರಾ ಅಳವಡಿಕೆ
* ಬ್ಯಾಂಕ್ ಸಿಬ್ಬಂದಿಗಳಿಗೆ ಪಿಂಚಣಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ರಾಜ್ಯದ ಮೊದಲ ಕೇಂದ್ರ ಸಹಕಾರಿ ಬ್ಯಾಂಕ್.
* ಸಹಕಾರಿ ಕ್ಷೇತ್ರದ ಸಿಬ್ಬಂದಿಗೆ ಹಾಗೂ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಧ್ಯಕ್ಷರು, ನಿರ್ದೇಶಕರು ಮತ್ತು ಸದಸ್ಯರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ವಿಶೇಷ ಅನುಭವ ನೀಡಲು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಸುಸಜ್ಜಿತ ತರಬೇತಿ ಕೇಂದ್ರ ಸ್ಫಾಪಿಸಲಾಗಿದೆ.
* ಬ್ಯಾಂಕ್ ವ್ಯವಹಾರವನ್ನು ಸರಳೀಕರಿಸುವ ನಿಟ್ಟಿನಲ್ಲಿ ಟ್ಯಾಬ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಿದೆ. ಮನೆ ಅಥವಾ ಕಛೇರಿಗಳಲ್ಲಿ ಕುಳಿತು ಮೊಬೈಲ್ ಸಂಪರ್ಕವಿರುವ ಬ್ಯಾಂಕಿನ ಟ್ಯಾಬ್ಲೆಟ್ ಬಳಸಿ ತಮ್ಮ ಬ್ಯಾಂಕ್ ಖಾತೆಯನ್ನು ತೆರೆಯುವ ಹಾಗೂ ನಿರ್ವಹಿಸುವ ನೂತನ ವ್ಯವಸ್ಥೆ ಇದಾಗಿದೆ.
* ಮೊಬೈಲ್ ಆ್ಯಪ್ ಮೂಲಕ ಬ್ಯಾಂಕಿನ ಶಾಖೆಗಳ ನಡುವೆ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸಬಹುದು. ಮೊಬೈಲ್ ಮುಖಾಂತರವೇ ಗ್ರಾಹಕರ ಖಾತೆಯ ವ್ಯವಹಾರದ ವಿಚಾರಣೆ, ಮಿನಿ ಸ್ಟೇಟ್ಮೆಂಟ್ ಹಾಗೂ ಪಾಸ್ಬುಕ್ ನಿರ್ವಹಣೆಯ ಸೌಲಭ್ಯ ಪಡೆಯಬಹುದು.
* ಬ್ಯಾಂಕಿನ ಮುಖ್ಯ ಶಾಖೆಗಳಲ್ಲಿ ಎಟಿಎಂ ಅಳವಡಿಸಲಾಗಿದ್ದು, ಎರಡು ಜಿಲ್ಲೆಗಳ 14 ಶಾಖೆಗಳಲ್ಲಿ ಎ.ಟಿ.ಎಂ. ಅಳವಡಿಸಲಾಗಿದೆ.
ಮುಂದಿನ ಯೋಜನೆಗಳು
*ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ (ಐಎಂಪಿಎಸ್ ) ಕಾರ್ಯಗತಗೊಳಿಸಲು ಚಿಂತನೆ ನಡೆಸಿದೆ. ಈ ಯೋಜನೆಯಿಂದ ಗ್ರಾಹಕರು ಮೊಬೈಲ್ ಮುಖಾಂತರ ತಮ್ಮ ಖಾತೆಯಿಂದ ಇತರ ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸಬಹುದು.
* ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ.
ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (ಬಿಬಿಪಿಎಸ್) ಯೋಜನೆ ಜಾರಿಗೆ ನಿರ್ಧರಿಸಲಾಗಿದ್ದು, ವಿದ್ಯುತ್ ಬಿಲ್, ನೀರಿನ ಬಿಲ್, ಡಿ.ಟಿ.ಎಚ್. ರಿಚಾರ್ಜ್ ಇತ್ಯಾದಿ ಪಾವತಿಗಳನ್ನು ಬ್ಯಾಂಕಿನ ಶಾಖೆಗಳಲ್ಲಿ ನಿರ್ವಹಿಸಬಹುದಾಗಿದೆ.
* ಮುಂದಿನ ಅವಧಿಯಲ್ಲಿ 10 ಹೊಸ ಶಾಖೆಗಳನ್ನು ತೆರೆಯುವ ಯೋಜನೆ.