ಹನೂರು: ಸಮಾಜಲ್ಲಿನ ಅಸಮಾನತೆ, ಶೋಷಣೆ ಹಾಗೂ ಅಸ್ಪಶ್ಯತೆ ತಾಂಡವಾಡುತ್ತಿದ್ದ ಆ ಕಾಲದಲ್ಲೇ ಎಲ್ಲ ಸಮುದಾಯದ ಹೆಣ್ಣು ಮಕ್ಕಳ ನಾಲಿಗೆಯ ಮೇಲೆ ಅಕ್ಷರದ ಬೀಜ ಬಿತ್ತಿದ ಸಾವಿತ್ರಿಬಾಯಿ ಪುಲೆ ಅವರ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕಿ ಮಹಾದೇವಮ್ಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಕ್ಷರ ಕ್ರಾಂತಿ ಹುಟು ್ಟ ಹಾಕಿದ ಸಾವಿತ್ರಿಬಾಯಿ ಪುಲೆ ಅವರಿಂದ ಇಂದು ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆಯ ಹಕ್ಕನ್ನು ಪಡೆಯಲು ಕಾರಣ ಕರ್ತರಾಗಿದ್ದಾರೆ ಎಂದರು ಸ್ಮರಿಸಿದರು.
ಬಾಲ್ಯವಿವಾಹ, ಸತಿಸಹಗಮನ ಪದ್ಧತಿ, ಕೇಶ ಮುಂಡನೆಯಂತಹ ಹಲವು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡಿ ಮಹಿಳೆಯರ ಸಬಲೀಕರಣಕ್ಕೆ ವಿನೂತನ ಯೋಜನೆಗಳನ್ನು ಜಾರಿಗೊಳಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದರು. ಈ ದಿಸೆಯಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಇವರಿಗೆ ಇಂಡಿಯಾಸ್ ಫಸ್ಟ್ ಲೇಡಿ ಟೀಚರ್ ಎಂದು ಬಿರುದು ಕೊಟ್ಟು ಸನ್ಮಾನಿಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹ ಶಿಕ್ಷಕಿ ಮಹಾಲಕ್ಷ್ಮೀ ಅವರು ಸಾವಿತ್ರ ಬಾಯಿ ಪುಲೆ ಅವರ ಜೀವನ ಚರಿತ್ರೆಯ ಬಗ್ಗೆ ತಿಳಿಸಿದರು. ಶಿಕ್ಷಕರಾದ ಮರಯ್ಯ, ಪ್ರೇಮಾ, ಜ್ಯೋತಿ, ಖಾನ್ ಇನ್ನಿತರರು ಹಾಜರಿದ್ದರು.