ಚಿತ್ರದುರ್ಗ: ಒಬ್ಬರ ರಕ್ತದಾನ ದಿಂದ ನಾಲ್ವರ ಜೀವ ಉಳಿಸಬಹುದು. ಹೀಗಾಗಿ ಇದೊಂದು ಮಹಾದಾನವಾಗಿದೆ. ಇಂತಹ ಪುಣ್ಯದ ಕೆಲಸದಲ್ಲಿ ತೊಡಗುವವರು ಪರಮಾತ್ಮನ ಕೃಪೆಗೂ ಪಾತ್ರರಾಗಲಿದ್ದಾರೆ ಎಂದು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್, ಆರ್ಯ ವೈಶ್ಯ ಸಮಾಜ, ವಾಸವಿ ರಕ್ತನಿಧಿ ಕೇಂದ್ರದಿಂದ ಶ್ರೀಗಳ 2ನೇ ವರ್ಷದ ಪೀಠಾರೋಹಣದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದ ನೇತೃತ್ವ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಸದಾ ಒಳಿತನ್ನೇ ಬಯಸಬೇಕು. ಪರೋಪಕಾರಿ ಗುಣ, ಜನಾನುರಾಗಿ ಸೇವೆಗಳ ಮೂಲಕ ಸಮಾಜದ ಸ್ವಾಸ್ಥೃ ಕಾಪಾಡಬೇಕು. ಕಷ್ಟದಲ್ಲಿ ಇರುವವರಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ 21 ಜನರು ರಕ್ತದಾನ ಮಾಡಿದರು. ವಾಸವಿ ಕ್ಲಬ್ ಅಧ್ಯಕ್ಷ ಎ.ಆರ್.ಲಕ್ಷ್ಮಣ್, ಕಾರ್ಯದರ್ಶಿ ಕೋಟೇಶ್ವರ ಗುಪ್ತ, ಖಜಾಂಚಿ ವೇಣುಗೋಪಾಲ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸತ್ಯನಾರಾಯಣ, ಮಂಜುನಾಥ್, ಸುಹಾಸ್, ಕಲ್ಪನಾ, ಸಂತೋಷ್ ಇತರರಿದ್ದರು.