ಮೂಡಿಗೆರೆ: ರಕ್ತದಾನ ಮಾಡುವುದರಿಂದ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ಸಾಹಿತಿ ಹಳೇಕೋಟೆ ರಮೇಶ್ ಹೇಳಿದರು.
ಬುಧವಾರ ಜೇಸಿ ಭವನದಲ್ಲಿ ಜೇಸಿ ಸಂಸ್ಥೆ, ಪತ್ರಕರ್ತರ ಸಂಘ ಹಾಗೂ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ರಕ್ತದಾನ ಶ್ರೇಷ್ಠ. ಇದರಿಂದ ಓರ್ವ ವ್ಯಕ್ತಿಯ ಜೀವ ಉಳಿಸುವುದು ಮಾತ್ರವಲ್ಲ. ಆ ವ್ಯಕ್ತಿಯ ಕುಟುಂಬವನ್ನೇ ಕಾಪಾಡಿದಂತಾಗುತ್ತದೆ. ರಕ್ತದಾನ ಶಿಬಿರಗಳು ಎಲ್ಲೆಡೆ ನಡೆಯಬೇಕು. ಇದರಿಂದ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ತ ಹುಡುಕಾಡುವ ಪ್ರಸಂಗ ಬರುವುದಿಲ್ಲ. ಹೀಗಾಗಿ ಪ್ರತಿಯೊಬ್ಬ ಆರೋಗ್ಯವಂತ ರಕ್ತದಾನ ಮಾಡಬೇಕು ಎಂದರು.
ಜಿಲ್ಲಾ ರಕ್ತನಿಧಿ ವಿಭಾಗದ ಡಾ. ಮುರಳೀಧರ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಹಾಗೂ 45 ಕೆಜಿಕ್ಕಿಂತ ಅಧಿಕ ತೂಕವಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಇದರಿಂದ ಯಾವುದೇ ಅಡ್ಡಪರಿಣಾಮ ಹಾಗೂ ತೊಂದರೆ ಉಂಟಾಗುವುದಿಲ್ಲ. ಬದಲಾಗಿ ದೇಹದ ಆರೋಗ್ಯ ಸ್ಥಿತಿ ಉತ್ತಮವಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಜೇಸಿ ಅಧ್ಯಕ್ಷ ಸುಪ್ರಿತ್ ಕಾರ್ಬೈಲ್, ಎಂಜಿಎಂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರಿಯಾಂಕಾ, ಎಎಸ್ಐ ವೆಂಕಟೇಶ್, ಪತ್ರಕರ್ತ ಅಮರ್ನಾಥ್, ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಪ್ರವೀಣ್ ಪೂಜಾರಿ, ಸಮಾಜಸೇವಕ ಫಿಶ್ ಮೋಣು, ಜೇಸಿ ಕಾರ್ಯದರ್ಶಿ ದೀಕ್ಷಿತ್, ಲೇಡಿ ಜೇಸಿ ಕಾರ್ಯದರ್ಶಿ ಶ್ರುತಿ ದೀಕ್ಷಿತ್ ಇದ್ದರು.