ರಾಣೆಬೆನ್ನೂರ: ತಾಲೂಕಿನ ಹುಲಿಹಳ್ಳಿ-ಕುನಬೇವು ಬಳಿಯ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿಯ ನಿವೇಶನಗಳ ಹಂಚಿಕೆ ಮಾಡುವ ಕುರಿತು ಮತ್ತು ದರಗಳ ಪರಿಷ್ಕರಿಸುವ ಕುರಿತು ಜಿಪಂ ಮಾಜಿ ಸದಸ್ಯ ಹಾಗೂ ನವಯುಗ ಸಂಸ್ಥಾಪಕ ಸಂತೋಷಕುಮಾರ ಪಾಟೀಲ ಮಂಗಳವಾರ ಎಪಿಎಂಸಿ ಕಾರ್ಯದರ್ಶಿ ಶೈಲಜಾ ಎಂ.ವಿ. ಅವರಿಗೆ ಆಕ್ಷೇಪಣೆ ಸಲ್ಲಿಸಿದರು.
ಎಪಿಎಂಸಿ ಬೋರ್ಡ್ ಚುನಾವಣೆ ಮುಗಿದು ಒಂದು ವರ್ಷ ಗತಿಸಿದೆ. ಈವರೆಗೆ ಎಪಿಎಂಸಿ ಚುನಾವಣೆಗಳು ನಡೆದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಪ್ರತಿನಿಧಿಯಾಗಲಿ ಅಥವಾ ವರ್ತಕರ ಪ್ರತಿನಿಧಿಗಳಾಗಲಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ರಾಣೆಬೆನ್ನೂರು ಎಪಿಎಂಸಿ ಮೆಗಾ ಮಾರ್ಕೆಟ್ನ ಸೈಟ್ ಹಂಚಿಕೆಯಾಗಲಿ ಹಾಗೂ ದರ ನಿಗದಿಪಡಿಸುವುದಾಗಲಿ ಮಾಡಿದರೆ ಅಂತಹ ಸಮಿತಿಯಲ್ಲಿ ಸರ್ಕಾರಿ ಪ್ರತಿನಿಧಿಗಳು ಮಾತ್ರ ಇದ್ದು ಕೇವಲ ಸರ್ಕಾರದ ಅನುಕೂಲವಾಗುವ ದೆಸೆಯಲ್ಲಿ ನಿರ್ಧಾರಗಳಿರುತ್ತೇವೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ, ವರ್ತಕರ ಮತ್ತು ಸರ್ಕಾರ ಮೂರು ಭಾಗಗಳ ಒಳಿತಿನ ದಿಸೆಯಲ್ಲಿ ನಿರ್ಧಾರಗಳು ಇರಬೇಕಾಗುತ್ತದೆ. ರೈತರ ಮತ್ತು ವರ್ತಕರ ಪ್ರತಿನಿಧಿ ನಿರ್ಧಾರ ಸಮಿತಿಯಲ್ಲಿ ಇರದ ಕಾರಣ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಏಕ ತರ್ಪಿಯಾಗುತ್ತದೆ. ಹಾಗಾಗಿ ಈ ಕೂಡಲೇ ದರ ನಿಗದಿಪಡಿಸುವ ಮತ್ತು ಸೈಟ್ ಹಂಚಿಕೆ ಪಡಿಸುವ ನಿರ್ಧಾರವನ್ನು ಕೃಷಿ ಉತ್ಪನ್ನ ಮಾರುಕಟ್ಟೆಯವರು ಸ್ಥಗಿತಗೊಳಿಸಿ ಸಮತೋಲನ ಸಮಿತಿ ಆದ ನಂತರ ಮಂಜೂರಾತಿ ಮಾಡಬೇಕು ಎಂದು ಆಕ್ಷೇಪಣಾ ಪತ್ರದಲ್ಲಿ ತಿಳಿಸಿದ್ದಾರೆ.
ನವಯುಗ ಸಂಘಟನೆಯ ಯುವರಾಜ ಬಾರಾಟಕ್ಕೆ, ಶಿವಕುಮಾರ ಹಿರೇಬಿದರಿ ಮತ್ತಿತರರಿದ್ದರು.