ಮಂಗಳೂರು: ಸಂಸ್ಕೃತ ಭಾರತಿ ಮಂಗಳೂರು ವತಿಯಿಂದ ಆ.10ರಿಂದ ಆ.16ರವರೆಗೆ ಸಂಸ್ಕೃತ ಸಪ್ತಾಹ ಆಯೋಜಿಸಲಾಗಿದೆ.
ಸ್ವಾತಂತ್ರೃದ ಅಮೃತ ಮಹೋತ್ಸವದ ಸಂದರ್ಭ ಮಂಗಳೂರು, ಉಡುಪಿ, ಕಾಸರಗೋಡು, ಪುತ್ತೂರು ಹಾಗೂ ಕೊಡಗು ಇಲ್ಲಿನ ಶಾಲೆಗಳಲ್ಲಿ, ಬಾಲಕೇಂದ್ರಗಳಲ್ಲಿ ಸಂಸ್ಕೃತ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಕೃತ ಭಾರತಿ ಮಂಗಳೂರು ವಿಭಾಗದ ಅಧ್ಯಕ್ಷ ಎಂ.ಆರ್.ವಾಸುದೇವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಕೃತ ದೇಶಭಕ್ತಿಗೀತೆ, ಸಂಸ್ಕೃತದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಚಾರ ಸಂಕಿರಣ, ಸಂಸ್ಕೃತ ಪ್ರಹಸನ, ಸೆಮಿನಾರ್ ಇತ್ಯಾದಿಗಳನ್ನು ಆಯೋಜಿಸಲಾಗಿದ್ದು, ಆ.16ರಂದು ಸಂಜೆ 5.30ಕ್ಕೆ ನಗರದ ಸಂಘನಿಕೇತನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಸ್ಕೃತ ತಜ್ಞರು, ಸಂಸ್ಕೃತ ವಿದ್ಯಾರ್ಥಿಗಳು, ಸಂಸ್ಕೃತಾಸಕ್ತರು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
1969ರಿಂದ ಅಂದಿನ ಕೇಂದ್ರ ಸರ್ಕಾರ ಶ್ರಾವಣ ಹುಣ್ಣಿಮೆಯ ದಿನವನ್ನು ಸಂಸ್ಕೃತ ದಿನವನ್ನಾಗಿ ಮತ್ತು ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಸ್ಕೃತ ಸಪ್ತಾಹ ಆಚರಿಸಲು ನಿರ್ಧರಿಸಿತು. ಇಂದು ಸಂಸ್ಕೃತ ಭಾರತಿಯ ಸಂಸ್ಕೃತ ಸಪ್ತಾಹವನ್ನು ದೇಶವ್ಯಾಪಿಯಾಗಿ ವಿವಿಧ ಕಾರ್ಯಕ್ರಮ, ಸೆಮಿನಾರ್ಗಳ ಮೂಲಕ ಆಯೋಜಿಸುತ್ತಿದೆ. ಈ ಸಮಯದಲ್ಲಿ ಸಾವಿರಾರು ಕಾರ್ಯ ಕರ್ತರು ಸಂಸ್ಕೃತ ಪ್ರಚಾರ, ಪ್ರಸಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂದವರು ವಿವರಿಸಿದರು.
ಸಂಸ್ಕೃತ ಭಾರತಿಯ ವಿಭಾಗ ಸಂಯೋಜಕ ಸತ್ಯನಾರಾಯಣ ಕೆ.ವಿ., ಬಾಲಕೇಂದ್ರ ಪ್ರಮುಖರಾದ ರಂಜಿನಿ ಕಾಮತ್, ಸದಸ್ಯ ದೇವರಾಜ ಆಚಾರ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.