ಸಂಡೂರು: ಗಣಿಧೂಳಿನಿಂದ ಹಾಳಾಗಿರುವ ಕೃಷಿಕರ ಜೀವನ ಮರು ಸ್ಥಾಪನೆಗಾಗಿ ಈಗಾಗಲೇ ಕೆಎಂಆರ್ಸಿಇ 26 ಸಾವಿರ ಕೋಟಿ ರೂ. ಸಂಗ್ರಹಿಸಿದ್ದು, ಗಾಣಿಬಾಧಿತ ಸಂಡೂರು, ಬಳ್ಳಾರಿ, ಹೊಸಪೇಟೆ ತಾಲೂಕಿನ 111 ಹಳ್ಳಿಗಳಿಗೆ ವಿತರಿಸಬೇಕು ಎಂದು ಮಹಾತ್ಮಗಾಂಧಿ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಎಚ್.ಎಂ.ಶಿವಾನಂದಯ್ಯ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಗಣಿಬಾಧಿತ ಪ್ರದೇಶಾಭಿವೃದ್ಧಿ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಹಣ ಬಿಡುಗಡೆ ಸಂಬಂಧ ಇತ್ತೀಚೆಗೆ ಕೆಎಂಆರ್ಸಿಇ (ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರೆಸ್ಟೋರೇಷನ್ ಕಾರ್ಪೋರೇಷನ್)
ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಡೆಹರಾಡೂನಿನ ಜೀವಶಾಸ್ತ್ರ, ಆರೋಗ್ಯ, ಕೃಷಿ ವಿಜ್ಞಾನಿಗಳು, ಹೈದರಾಬಾದ್ನ ಕೃಷಿ, ಜೀವಿಶಾಸ್ತ್ರ ವಿಜ್ಞಾನಿಗಳು ಬಂದು ಶೇ.45 ಕೃಷಿ , ಪರಿಸರ ನಾಶವಾಗಿದೆ ಎಂದು ಹೇಳಿದ್ದಾರೆ. ಆದರೆ, 12 ವರ್ಷ ಕಳೆದರೂ ಗಣಿಬಾಧಿತ 111 ಹಳ್ಳಿಗಳಿಗೆ ಪರಿಹಾರ ವಿತರಿಸಿಲ್ಲ. ಸರ್ಕಾರ ಚಾಲ್ತಿ ಯೋಜನೆಗಳಿಗೆ ಈ ಹಣ ಬಳಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಪರಿಹಾರ ನೀಡಬೇಕು ಇಲ್ಲವೆ ಗಣಿಬಾಧಿತರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.