ಕೊಪ್ಪಳ: ಸಾಹಿತ್ಯ ಸಮ್ಮೇಳನಗಳು ನಮ್ಮ ಸಂಸ್ಕೃತಿಯ ಪ್ರತೀಕ. ಮಾ.13ರಂದು 9ನೇ ಕೊಪ್ಪಳ ತಾಲೂಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು ಯಶಸ್ಸಿಗೆ ಎಲ್ಲರೂ ಕೈಜೋಡಿಸಿ ಎಂದು ಸಂಸದ ಸಂಗಣ್ಣ ಕರಡಿ ಮನವಿ ಮಾಡಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮ್ಮೇಳನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಮ್ಮೇಳನ ನಮ್ಮೆಲ್ಲರ ಖುಷಿ ಹೆಚ್ಚಿಸಿದೆ. ನಮ್ಮ ನಾಡು-ನುಡಿ, ಸಂಸ್ಕೃತಿ ನೆನಪಿಸಿಕೊಳ್ಳಲು ನೆಪವಾಗಿವೆ. ಎಲ್ಲ ಕನ್ನಡ ಮನಸ್ಸುಗಳನ್ನು ಬೆಸೆವ ಕಾರ್ಯ. ನಾವೆಲ್ಲರೂ ಇದರಲ್ಲಿ ತನುಮನದಿಂದ ಭಾಗಿಯಾಗಬೇಕು. ಸಾಹಿತ್ಯ ಜೀವನದೊಂದಿಗೆ ಬೆಸೆದುಕೊಂಡಿದೆ. ಆದಿ ಕವಿ ಪಂಪನಿಂದ ಹಿಡಿದು ಇಂದಿನ ಕವಿಗಳವರೆಗೆ ಎಲ್ಲರೂ ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸಿದ್ದಾರೆ. ಇದು ನಮ್ಮೆಲ್ಲರ ಕಾರ್ಯಕ್ರಮ. ಯಾವುದೇ ವರ್ಗಕ್ಕೆ ಸೀಮಿತವಲ್ಲ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಜಿಲ್ಲೆಯಲ್ಲಿ ರಜತ ಮಹೋತ್ಸವದೊಂದಿಗೆ 9ನೇ ತಾಲೂಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಇದು ಖುಷಿ ವಿಚಾರ. ಬೇರೆ ರಾಜ್ಯಗಳಲ್ಲಿ ಮಾತೃ ಭಾಷೆಗೆ ಸಾಕಷ್ಟು ಆದ್ಯತೆ ಇದೆ. ಅದರಂತೆ ನಾವು ನಮ್ಮ ಭಾಷೆ ಪ್ರೀತಿಸಬೇಕು. ಸಮ್ಮೇಳನ ನೆಪದಲ್ಲಿ ನಮ್ಮ ಸಂಸ್ಕೃತಿ ಮೆಲಕು ಹಾಕೋಣ. ಇತರ ತಾಲೂಕಿಗೆ ಮಾದರಿ ಆಗುವಂತೆ ಸಮ್ಮೇಳನ ಆಯೋಜಿಸೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ತಾಪಂ ಇಒ ದುಂಡಪ್ಪ ತುರಾದಿ, ಪೌರಾಯುಕ್ತ ಎಚ್.ಎನ್.ಭಜಕ್ಕನವರ, ಗ್ರೇಡ್ 2 ತಹಸೀಲ್ದಾರ್ ಗವಿಸಿದ್ದಪ್ಪ ಮಣ್ಣೂರ, ಸಮ್ಮೇಳನ ಅಧ್ಯಕ್ಷ ಶರಣಪ್ಪ ಬಾಚಲಾಪುರ ಇದ್ದರು.