ಚಂಡೀಗಢ: ಕಾಂಗ್ರೆಸ್ ಪಕ್ಷದ ಬಗ್ಗೆ ಸದಾ ಅಸಮಾಧಾನ ಹೊಂದುತ್ತಲೇ ಇದ್ದ, ಸತತ ಅವಮಾನದಿಂದ ರೋಸಿ ಹೋಗಿ ಒಳಗೊಳಗೇ ಕುದಿಯುತ್ತಿದ್ದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನಿನ್ನೆ ರಾಜೀನಾಮೆ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ನಾಲ್ಕು ತಿಂಗಳು ಇರುವಾಗ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿರುವ ಕಾರಣ, ಈ ವಿಷಯ ರಾಜಕೀಯದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ.
ಇದರ ಬೆನ್ನಲ್ಲೇ ಇದೀಗ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಇಂದು ಈ ಬಗ್ಗೆ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ. ಯಾರನ್ನು ಸದ್ಯ ಮುಖ್ಯಮಂತ್ರಿ ಮಾಡಬೇಕು ಎನ್ನುವ ನಿರ್ಧಾರವವನ್ನು ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿಡಲಾಗಿದೆ.
ಇದಾಗಲೇ ಸಿಎಂ ರೇಸ್ನಲ್ಲಿ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಹೆಸರು ಕೇಳಿ ಬರುತ್ತಿದೆ. ಆದರೆ ಇವರು ಸುತರಾಂ ಸಿಎಂ ಆಗೋದು ಬೇಡ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ. ಇವರು ಮುಖ್ಯಮಂತ್ರಿ ಆಗುವುದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿರುವ ಅಮರೀಂದರ್, ಸಿಧು ಏನಾದರೂ ಪಂಜಾಬ್ ಸಿಎಂ ಆದರೆ ದೇಶದ ಭದ್ರತೆಗೆ ಧಕ್ಕೆ ಎಂದಿದ್ದಾರೆ. ಏಕೆಂದರೆ ಸಿಧು ಪಾಕಿಸ್ತಾನ ಸೇನಾ ಮುಖ್ಯಸ್ಥ ಖ್ವಾಮರ್ ಜಾವೇದ್ ಬಾಜ್ವಾ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರ ಸ್ನೇಹಿತ. ಸಿಧು ಅಪಕ್ವ ವ್ಯಕ್ತಿ ಎನ್ನುವುದು ಅಮರೀಂದರ್ ಸಿಂಗ್ ಮಾತು.
ಅಂದ ಹಾಗೆ ಪಂಜಾಬ್ನ ಒಂದು ಪ್ರಾಂತ್ಯ ಪಾಕಿಸ್ತಾನದ ಜತೆ ಹಂಚಿಕೊಂಡಿದೆ ಎನ್ನುವುದೂ ಇಲ್ಲಿ ಉಲ್ಲೇಖಾರ್ಹ.
ಸಿಧು ಅವರನ್ನು ಹೊರತುಪಡಿಸಿದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಪಂಜಾಬ್ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್, ಸುಖಜಿಂದರ್ ಸಿಂಗ್ ರಾಂಧವ ಅವರ ಹೆಸರು ಕೇಳಿಬಂದಿದೆ. ಜತೆಗೆ, ಪಕ್ಷದ ಹಿರಿಯ ನಾಯಕರಾದ ಅಂಬಿಕಾ ಸೋನಿ, ರಾಜಿಂದರ್ ಸಿಂಗ್ ಬಾಜ್ವಾ, ಬ್ರಹ್ಮ ಮೊಹಿಂದ್ರಾ, ವಿಜಯ್ ಇಂದರ್ ಸಿಂಗ್ಲಾ, ಪಂಜಾಬ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕುಲ್ಜಿತ್ ಸಿಂಗ್ ನಾಗ್ರಾ ಮತ್ತು ಸಂಸದ ಪರ್ತಾಪ್ ಸಿಂಗ್ ಬಾಜ್ವಾ ಸೇರಿದಂತೆ ಇತರ ಹೆಸರುಗಳೂ ಕೇಳಿಬರುತ್ತಿವೆ.
ಪಕ್ಷದ ಮೂಲಗಳ ಪ್ರಕಾರ, ಚಂಡೀಗಢದಲ್ಲಿ ಇಂದು ಕರೆಯಲಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯ ನಂತರ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ.
ಮತ್ತೆ ಸುದ್ದಿಯಲ್ಲಿ ಬಿಗ್ಬಾಸ್ ಸ್ಪರ್ಧಿ ವೈಜಯಂತಿ: ಆನ್ಲೈನ್ನಲ್ಲಿ ಗೆಳೆಯನ ಜತೆ ಎಂಗೇಜ್ಮೆಂಟ್
ಕರ್ಟನ್ ಸುತ್ತಿಸಿ ಪರೀಕ್ಷೆ ಬರೆಸಿದರು! ಚಡ್ಡಿಯಲ್ಲೇನು ಸಮಸ್ಯೆ ಎಂದು ಕೆಂಡಾಮಂಡಲವಾದ ಯುವತಿ