ಬೆಂಗಳೂರು: ಹಲವು ಅಡ್ಡಿ ಆತಂಕಗಳ ನಡುವೆ ಕೊನೆಗೂ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎಲ್ಲಾ ರೀತಿಯ ಮಂಜಾಗರೂಕತಾ ಕ್ರಮಗಳನ್ನು ಅನುಸರಿಸಿ ಎರಡೇ ದಿನದಲ್ಲಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ನಡೆಸಿದ್ದು, ಇದೇ 19 ಮತ್ತು 22ರಂದು ಪರೀಕ್ಷೆಗೆ ವೇಳಾಪಟ್ಟಿ ನಿಗದಿಯಾಗಿದೆ.
ಈ ನಡುವೆಯೇ, ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಆದರೆ ಕರೊನಾ ಹಾವಳಿ ಹೆಚ್ಚಿಗೆ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬಾರದು ಎಂದು ಅಲ್ಲಲ್ಲಿ ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಇದೀಗ ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡುವಂತೆ ಕೋರಿ ಸಿಂಗ್ರೇಗೌಡ ಎಂಬುವವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವಂತೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನೂ ರದ್ದು ಮಾಡುವಂತೆ ಅರ್ಜಿಯಲ್ಲಿ ಅವರು ಕೋರಿದ್ದಾರೆ.
ಜುಲೈ 19 ರಂದು ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ಗಣಿತ ಪರೀಕ್ಷೆ ಹಾಗೂ 22 ರಂದು ಭಾಷಾ ಪರೀಕ್ಷೆ ನಡೆಯಲಿದೆ. ಕೆಲವು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೂಡ ಕಳುಹಿಸಲಾಗಿದೆ. ಆದರೆ ಇಂಥ ಪರಿಸ್ಥಿತಿಯಲ್ಲಿ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸುವುದು ಸರಿಯಲ್ಲ. ಇದಾಗಲೇ ಕೆಲವು ರಾಜ್ಯಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನೂ ರದ್ದು ಮಾಡಲಾಗಿದೆ, ಸಿಬಿಎಸ್ಸಿ ಬೋರ್ಡ್ ಕೂಡ ಪರೀಕ್ಷೆ ರದ್ದು ಮಾಡಿದೆ. ಪರಿಸ್ಥಿತಿ ಹೀಗಿರುವಾಗಿ ರಾಜ್ಯ ಸರ್ಕಾರ ಪರೀಕ್ಷೆಗೆ ಮುಂದಾಗಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಕೂಡ ಪರೀಕ್ಷೆಯನ್ನು ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ನಡೆಸಲು ಹೋಗಿದ್ದ ಆಂಧ್ರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗರಂ ಆಗಿತ್ತು. ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಾದರೆ ಸರ್ಕಾರವನ್ನು ಹೊಣೆಯನ್ನಾಗಿಸಿ ಮಾಡುವ ಎಚ್ಚರಿಕೆಯನ್ನು ನೀಡಿತ್ತು. ಇದರ ನಡುವೆಯೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ಎಸ್ಎಸ್ಎಲ್ಸಿ ಪರೀಕ್ಷಾ ಭವಿಷ್ಯ ಹೈಕೋರ್ಟ್ ಕೈಯಲ್ಲಿದೆ.
ನಡುರಸ್ತೆಯಲ್ಲಿಯೇ ರಾಜಾರೋಷವಾಗಿ ಓಡಾಡಿದ ಗುಜರಾತ್ ಸಿಂಹಗಳು: ನೋಡುಗರ ಎದೆಯಲ್ಲಿ ನಡುಕ!
ಪತ್ನಿಯಿಂದ ದೂರವಿರಲು ನಕಲಿ ಕೋವಿಡ್ ರಿಪೋರ್ಟ್ ಕೊಟ್ಟ ನವವಿವಾಹಿತ – ಮುಂದಾದದ್ದು ದುರಂತ!