ನವದೆಹಲಿ: ಪ್ರೀತಿಸುವುದು ತಪ್ಪಲ್ಲ, ಪ್ರೇಮಿಗಳನ್ನು ಶಿಕ್ಷಿಸುವುದು ಗಂಭೀರ ಅಪರಾಧ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಪ್ರೇಮಿಗಳು ಸೇರಿದಂತೆ ಮೂವರನ್ನು ಭೀಕರವಾಗಿ ಹಲ್ಲೆ ಮಾಡಿ ನಂತರ ಗಲ್ಲಿಗೇರಿಸುವಂತೆ ಅಲ್ಲಿಯ ಖಾಪ್ ಪಂಚಾಯತ್ ಹೊರಡಿಸಿದ್ದ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೋರ್ಟ್, ಈ ರೀತಿ ಪ್ರೇಮಿಗಳನ್ನು ಶಿಕ್ಷಿಸುವುದು ಕಾನೂನಿನ ಅಡಿ ಅಪರಾಧವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.
1991ರಲ್ಲಿ ಮೂವರನ್ನು ಗಲ್ಲಿಗೇರಿಸಲಾಗಿತ್ತು. ಈ ಸಂಬಂಧ ಎಂಟು ಅಪರಾಧಿಗಳಿಗೆ ಗಲ್ಲುಶಿಕ್ಷೆ ಹಾಗೂ 30 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ವಿಧಿಸಿದೆ. ತಮಗೆ ಜಾಮೀನು ನೀಡುವಂತೆ ಕೋರಿ 11 ಮಂದಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿದೆ.
1991ರಲ್ಲಿ ನಡೆದಿತ್ತು ಈ ಭೀಕರ ಘಟನೆ. ಅಲ್ಲಿಯ ಬೇರೆ ಬೇರೆ ಜಾತಿಗೆ ಸೇರಿದ ಯುವಕ-ಯುವತಿ ಓಡಿಹೋಗಿದ್ದರು. ನಂತರ ಗ್ರಾಮಸ್ಥರು ಅವರನ್ನು ಹಿಡಿದು ತಂದಿದ್ದರು. ನಂತರ ಖಾಪ್ ಪಂಚಾಯತ್ ನಡೆದಿತ್ತು. ನಂತರ ಪ್ರೇಮಿಗಳು ಹಾಗೂ ಅವರಿಗೆ ಸಹಕರಿಸಿದ ವ್ಯಕ್ತಿಯೊಬ್ಬನಿಗೆ ಗಲ್ಲುಶಿಕ್ಷೆಗೆ ಆದೇಶ ಹೊರಡಿಸಲಾಗಿತ್ತು. ಅಷ್ಟೇ ಅಲ್ಲ, ಪ್ರೇಮಿಗಳ ಖಾಸಗಿ ಅಂಗವನ್ನು ಸುಟ್ಟುಹಾಕಿ ನಂತರ ಅವರನ್ನು ಹತ್ಯೆ ಮಾಡಲಾಗಿತ್ತು.
ಯುವತಿ ತಾನು ಯುವಕನ ಜತೆ ವಾಸಿಸುವಾಗಿ ಬೇಡಿಕೊಂಡಿದ್ದಳು. ಆದರೆ ಅದಕ್ಕೆ ಒಪ್ಪದಿದ್ದ ಪಂಚಾಯತ್ ಸದಸ್ಯರು ಅವರನ್ನು ನೇಣಿಗೇರಿಸಿ ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಂಟು ಅಪರಾಧಿಗಳಿಗೆ ಗಲ್ಲುಶಿಕ್ಷೆ ಹಾಗೂ 30 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಎಸ್ಎ ಬೊಬ್ಡೆ ನೇತೃತ್ವದ ಪೀಠವು, “ಪ್ರೀತಿಯಲ್ಲಿ ಬಿದ್ದಿದ್ದಕ್ಕಾಗಿ ನೀವು ಯಾರನ್ನಾದರೂ ಶಿಕ್ಷಿಸಲು ಸಾಧ್ಯವಿಲ್ಲ. ಇದು ಕೆಟ್ಟ ಸ್ವರೂಪದ ಅಪರಾಧ” ಎಂದು ಹೇಳಿದೆ. ವಯೋಮಾನದ ಆಧಾರದ ಮೇಲೆ ತಮ್ಮನ್ನು ಬಿಡುಗಡೆ ಮಾಡುವಂತೆ ಈ ಎಲ್ಲಾ ಅಪರಾಧಿಗಳು ಕೋರಿದ್ದರು. ಆದ್ದರಿಂದ ವೈದ್ಯಕೀಯ ತಪಾಸಣೆಗೆ ಆದೇಶಿಸಿರುವ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.
‘ಮಹಿಳೆಯರ ಸ್ಥಾನ ಎತ್ತರಕ್ಕೆ ಒಯ್ದ ಸೋನಿಯಾ ಗಾಂಧಿ, ಮಾಯಾವತಿಗೆ ಸಿಗಲಿ ಭಾರತ ರತ್ನ’