ಕೀವ್: ಯೂಕ್ರೇನ್ನಿಂದ ಗಡಿ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ನೆರೆಯ ದೇಶಗಳ ಮೂಲಕ ‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಯೂಕ್ರೇನ್ನಲ್ಲಿ 20,000 ಭಾರತೀಯರಿದ್ದರು. ಈ ಪೈಕಿ 17,000 ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ. 6,000 ಜನ ತವರಿಗೆ ಮರಳಿದ್ದು, 1,700 ಜನ ಉಕ್ರೇನ್ ತೊರೆಯಲು ಕಾಯುತ್ತಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ಕನ್ನಡಿಗ ನವೀನ್ ಗುಂಡೇಟಿಗೆ ಪ್ರಾಣ ಕಳೆದುಕೊಂಡಿದ್ದು, ದೆಹಲಿಯ ವಿದ್ಯಾರ್ಥಿ ಹರ್ಜೋತ್ ಸಿಂಗ್ಗೆ ಗುಂಡು ತಗುಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಹರ್ಜೋತ್ ಗುಣಮುಖರಾಗಿದ್ದು ಭಾರತಕ್ಕೆ ವಾಪಸ್ ಆಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ವಿಜಯ್ ಕುಮಾರ್ ಸಿಂಗ್, ಕೀವ್ನಲ್ಲಿ ನಡೆದ ಸಂಘರ್ಷದಲ್ಲಿ ಗುಂಡೇಟಿಗೆ ಒಳಗಾಗಿ, ಪಾಸ್ಪೋರ್ಟ್ ಕಳೆದುಕೊಂಡಿದ್ದ ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್ ಸೋಮವಾರ ಭಾರತ ತಲುಪಲಿದ್ದಾರೆ. ಕುಟುಂಬಸ್ಥರ ಆರೈಕೆಯೊಂದಿಗೆ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ದೆಹಲಿ ಬಳಿಯ ಛತ್ತರ್ಪುರದ ವಿದ್ಯಾರ್ಥಿಯಾಗಿರುವ ಹರ್ಜೋತ್ ತನಗೆ ಗುಂಡೇಟು ತಗುಲಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಭಾರತೀಯ ರಾಯಭಾರ ಕಚೇರಿಯು ಈ ಹಿಂದೆ ಎಲ್ಲರೂ ಕೀವ್ ತೊರೆಯಬೇಕು ಎಂದು ಮನವಿ ಮಾಡಿತ್ತು. ಈ ಹಿನ್ನೆಲೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನನಗೆ ಗುಂಡೇಟು ತಗುಲಿ, ಗಾಯಗಳಾಗಿತ್ತು. ಈ ವೇಳೆ ನನ್ನ ದಾಖಲೆಗಳು ಮಿಸ್ ಆಗಿದ್ದು, ಭಾರತೀಯ ರಾಯಭಾರ ಕಚೇರಿ ಸಹಕರಿಸಿ, ಭಾರತಕ್ಕೆ ತೆರಳಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದೆ. ನನ್ನ ಮನವಿಗೆ ರಾಯಭಾರ ಕಚೇರಿ ಸ್ಪಂದಿಸಿದೆ. ಇದೀಗ ನಾನು ವಾಪಸಾಗಿದ್ದೇನೆ, ಮರುಜೀವ ಪಡೆದಿರುವ ಖುಷಿಯಿದೆ ಎಂದಿದ್ದಾರೆ. ಭಾರತ ಸರ್ಕಾರ ಸಹಾಯ ಮಾಡಿದ್ದು, ಧನ್ಯವಾದ ಎಂದಿದ್ದಾನೆ.
ಯೂಕ್ರೇನ್ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಹೊಂದಿಕೊಂಡಿರುವ ನೆರೆ ದೇಶಗಳ ಸಹಕಾರದೊಂದಿಗೆ ಭಾರತೀಯರನ್ನು ವಿಮಾನದ ಮೂಲಕ ದೇಶಕ್ಕೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ.
ಷೇರುಪೇಟೆಯ ಅರಸಿಯಾಗಿದ್ದ ಚಿತ್ರಾ ಅರೆಸ್ಟ್: ಮುಖವನ್ನೇ ನೋಡದ ನಿಗೂಢ ಯೋಗಿಯ ಜತೆ ಇದೆಂಥ ಸಂಬಂಧ?
ಯೂಕ್ರೇನ್ನಿಂದ ಮನೆಗೆ ಬಂದ ರಾಯಚೂರು ವಿದ್ಯಾರ್ಥಿಗಳು: ಗುಂಡೇಟಿಗೆ ಬಲಿಯಾದ ನವೀನ್ ಸ್ನೇಹಿತರಿವರು