ಬೆಂಗಳೂರು: ಇಂದು ನಡೆಯಬೇಕಿದ್ದ ಬಿಜೆಪಿ ಸಾಧನಾ ಸಮಾವೇಶವನ್ನು ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಈ ಕುರಿತು ನಿನ್ನೆ ಮಧ್ಯರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿದ್ದರು.
ಇದೀಗ, ಪತ್ರಿಕಾಗೋಷ್ಠಿ ಕರೆದಿರುವ ಮುಖ್ಯಮಂತ್ರಿಗಳು, ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
‘ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಬ್ಯಾಂಕ್ವೆಟ್ ಹಾಲ್ ಮತ್ತು ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಾಗಿದ್ದ ಸಾಧನಾ ಸಮಾವೇಶ ಕಾರ್ಯಕ್ರಮರದ್ದಾಗಿದೆ. ಈ ಸಮಾವೇಶಕ್ಕೆ ಕಾರ್ಯಕರ್ತರು ತಯಾರಿ ಮಾಡಿದ್ದರು, ಆದರೆ ನಮ್ಮ ಕಾರ್ಯಕರ್ತ ಪ್ರವೀಣ್ ಅವರ ಹತ್ಯೆ ಹಿನ್ನೆಲೆಯಲ್ಲಿ, ಕಾರ್ಯಕರ್ತರ ಜತೆ ಚರ್ಚೆ ಮಾಡಿ ಈ ನಿರ್ಣಯವನ್ನು ಆತ್ಮ ಸಾಕ್ಷಿಯಾಗಿ ತೆಗೆದುಕೊಂಡಿದ್ದೇನೆ.
ಜನರಿಗೆ ಏನು ಮಾಡಿದ್ದೇವೆಂದು ಹೇಳುವುದು ಉತ್ತರದಾಯಿತ್ವ. ಮುಂದೆ ಕಲ್ಯಾಣ ಕಾರ್ಯಕ್ರಮ ಏನು ಮಾಡುತ್ತೇವೆಂದು ಹೇಳುವ ಸಂದರ್ಭ ಇದಾಗಿರುವ ಕಾರಣ ಇಲ್ಲಿ ಕೆಲವೊಂದು ಮಾಹಿತಿಗಳನ್ನು ನೀಡುತ್ತಿದ್ದೇನೆ. ಒಂದು ವರ್ಷದ ಅವಧಿಯಲ್ಲಿ ಸವಾಲುಗಳ ಮಧ್ಯೆ ಸಾಧನೆ ಮಾಡಿ ಕರ್ನಾಟಕ ಮುನ್ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
ನಮ್ಮದು ಟೀಂ ವರ್ಕ್. ನಮ್ಮ ಸಂಪುಟದಲ್ಲಿ ದಕ್ಷ, ಅನುಭವ, ಚೈತನ್ಯಭರಿತ ಯುವಕರು, ಸೇವಾ ಮನೋಭಾವದವರಿದ್ದಾರೆ. ಇವರೆಲ್ಲರ ಪಾಲು ಈ ಒಂದು ವರ್ಷದಲ್ಲಿ ನನ್ನ ಜತೆ ಇದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಎರಡು ವರ್ಷ ಕೋವಿಡ್ ಸಮರ್ಥವಾಗಿ ಎದುರಿಸಿದ್ದರು.
ಆಡಳಿತ ಯಾರ ಪರವಾಗಿದೆ ಎಂಬುದು ಬಹಳಮುಖ್ಯ. ನಮ್ಮ ನಿರ್ಣಯಗಳ ಮೂಲಕ ಜನಪರ ಆಡಳಿತ ನೀಡಿದ್ದೇವೆ. ರೈತರ ಪರವಾಗಿ ನಿರ್ಣಯ ಕೈಗೊಂಡೆದ್ದೇವೆ. ರೈತ ವಿದ್ಯಾನಿಧಿಯಿಂದ ಕಳೆದ ವರ್ಷ 8.5 ಲಕ್ಷ ವಿದ್ಯಾರ್ಥಿಗಳಿಗೆ ಲಾಭ ಸಿಕ್ಕಿದೆ. ಈ ವರ್ಷ 10 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ರೈತರ ಮಕ್ಕಳಲ್ಲಿ ಭರವಸೆ ಮೂಡಿದೆ ಎಂದರು.
ಇದಲ್ಲದೇ ತಮ್ಮ ಸರ್ಕಾರದ ಸಾಧನೆ ಕುರಿತು ಅವರು ಹೇಳಿದ್ದಿಷ್ಟು:
– ಸಾಮಾಜಿಕ ಭದ್ರತಾ ಯೋಜನೆ ವಂತಿಗೆ ಹೆಚ್ಚಿಸಲಾಗಿದೆ. ಕೆಳಸ್ತರದಲ್ಲಿರುವವರಿಗೆ ಹೆಚ್ಚಿನ ಆರ್ಥಿಕ ನೆರವು ಸಿಕ್ಕಂತಾಗಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಹೆಚ್ಚಿನ ನೆರವು ನೀಡಲಾಗಿದೆ.
-25 ಲಕ್ಷ ಬಡ ಕುಟುಂಬಗಳಿಗೆ 75 ಯೂನಿಟ್ ವಿದ್ಯುತ್ ಪುಕ್ಕಟೆಯಾಗಿ ನೀಡುವ ನಿರ್ಧಾರ ಮಾಡಿದ್ದೇವೆ.
– ನೂರು ಎಸ್ಸಿಎಸ್ಟಿ, ಎಪ್ಪತ್ತೈದು ಹಿಂದುಳಿದ ವರ್ಗದ ಹಾಸ್ಟೆಲ್ ಮಾಡುತ್ತಿದ್ದೇವೆ. ಮೂರೂವರೆ ಸಾವಿರ ಹೆಕ್ಟೇರ್ ಭೂಮಿ ಖರೀದಿಸಿಕೊಟ್ಟಿದ್ದೇವೆ.
– ಸ್ತ್ರೀ ಶಕ್ತಿ ಸಂಘದ ಬಲವರ್ಧನೆಗೆ ಕ್ರಮಕೈಗೊಂಡಿದ್ದು 33 ಸಾವಿರ ಸಂಘಗಳಿಗೆ ಹಣ ಕೊಟ್ಟು, ಸಾಲ ಸಿಗುವಂತೆ ಮಾಡಿ, ಬೇರೆ ಬೇರೆ ಯೋಜನೆ ಕೊಟ್ಟು ತರಬೇತಿ ನೀಡಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತಿದೆ. ಐದು ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೊಡುವ ಗುರಿ ಇದೆ.
-ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಕಳೆದ ನಾಲ್ಕು ತ್ರೈಮಾಸಿಜದಲ್ಲಿ ಎಫ್ ಡಿಐ ಬಂದಿರುವುದು ಕರ್ನಾಟಕ. ನೀತಿ ಆಯೋಗದ ರ್ಯಾಂಕಿಂಗ್ನಲ್ಲಿ ಮೊದಲು ಇರುವುದು ಕರ್ನಾಟಕ. ದಾವೋಸ್ಗೆ ಹೋಗಿ ಬಂದ ಬಳಿಕ ಎಂಒಯು ಆಗುತ್ತಿದೆ.
– ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡುತ್ತಿದ್ದೇವೆ. ದೊಡ್ಡ ಬಂಡವಾಳ ಹೂಡಿಕೆ ಬರಲಿದೆ.
– ಮೂರು ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯ ಹೆದ್ದಾರಿಗೆ ಕೊಡಲಾಗಿದೆ. ಐದು ಲಕ್ಷ ಬಸವ ವಸತಿ ಯೋಜನೆಗೆ ಮಂಜೂರಾತಿ ಕೊಡಲಾಗಿದೆ. ಹಿಂದೆ ಮಂಜೂರಾದ ನಾಲ್ಕು ಲಕ್ಷ ಮನೆ ಡಿಸೆಂಬರ್ ಒಳಗೆ ಮುಗಿಸುವ ಗುರಿ ಹೊಂದಲಾಗಿದೆ.
-ಎಸ್ಸಿಎಸ್ಟಿ ವರ್ಗದವರ ಮನೆಗೆ ಎಪ್ಪತ್ತೈದು ಯೂನಿಟ್ ಉಚಿತ ವಿದ್ಯುತ್ ಯೋಜನೆ ಜಾರಿ ಮಾಡಿದ್ದು, ಡಿಬಿಟಿ ಮೂಲಕ ವಿತರಿಸುವ ಕಾರ್ಯಕ್ಕೆ ಇವತ್ತಿನಿಂದ ಆರಂಭ ಮಾಡುತ್ತಿದ್ದೇವೆ. ತಿಂಗಳಲ್ಲಿ ಆಧಾರ್ ಸೀಡಿಂಗ್ ಮಾಡಿ 25 ಲಕ್ಷ ಎಸ್ಸಿ ಎಸ್ಟಿ ಕುಟುಂಬಕ್ಕೆ ಅನುದಾನ ಬಿಡುಗಡೆ.
– ಬಾಬು ಜಗಜೀವನ್ ರಾಂ ಹೆಸರಿನ ನೂರು ಯುವಕರಿಗೆ ಸ್ವಯಂ ಉದ್ಯೋಗ ನೀಡಲಾಗುತ್ತದೆ.
– ಎಂಟು ಸಾವಿರ ಶಾಲಾ ಕೊಠಡಿ ಏಕಕಾಲದಲ್ಲಿ ನಿರ್ಮಿಸಲಾಗುತ್ತದೆ. ಇದಕ್ಕೆ ವಿವೇಕ ಎಂದು ಹೆಸರು ಇಡಲಾಗಿದೆ.
– ನೂರು ಪಿಎಚ್ ಸಿಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ.
– ಯುವಕರಿಗಾಗಿ ವಿಶೇಷ ಯೋಜನೆ ಮಾಡಿದ್ದು, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ. ಪ್ರತಿ ಗ್ರಾಮಕ್ಕೆ (28, ಸಾವಿರ ಗ್ರಾಮ ಇದ್ದು) ಪ್ರತಿ ಗ್ರಾಮದಲ್ಲಿ ಯುವಕರ ಸಂಘ ರಚಿಸಿ ಅಲ್ಲಿ ತರಬೇತಿ ನೀಡಲಾಗುತ್ತದೆ. ಐದು ಲಕ್ಷ ಸ್ವಯಂ ಉದ್ಯೋಗ ಯುವಕರಿಗೆ ತರಬೇತಿ ಕೊಡಲಾಗುತ್ತದೆ.
– ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಸ್ತ್ರೀ ಶಕ್ತಿ ಸ್ತ್ರೀ ಸಾಮರ್ಥ್ಯ ಯೋಜನೆ ರೂಪಿಸಲಾಗಿದೆ.
– ಗೋವಿನ ರಕ್ಷಣೆಗೆ ಹೊಸ ಯೋಜನೆ ಮಾಡಿದ್ದು, ಪ್ರತಿ ಗೋವಿಗೆ ಹನ್ನೊಂದು ಸಾವಿರ ರೂ. ಕೊಡಬಹುದು.
– ಹನ್ನೊಂದು ಸಾವಿರ ನೇಕಾರ ಮಕ್ಕಳಿಗೆ ವಿದ್ಯಾನಿಧಿ ಘೋಷಣೆ ಮಾಡಲಾಗಿದ್ದು, ಐವತ್ತು ಸಾವಿರ ಟ್ಯಾಕ್ಸಿ ಚಾಲಕರ ಮಕ್ಕಳಿಗೆ, ಮೀನುಗಾರರ ಮಕ್ಕಳಿಗೆ ಕೂಡ ವಿದ್ಯಾನಿಧಿ ಯೋಜನೆ ಹಮ್ಮಿಕೊಳ್ಳಲಾಗಿದೆ.