ಬೆಂಗಳೂರು: ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಪಡೆಯಲು ಜೈಲು ಅಧಿಕಾರಿಗಳಿಗೆ ಎರಡು ಕೋಟಿ ರೂಪಾಯಿ ಲಂಚ ಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ತಮಿಳುನಾಡಿನ ಎಐಎಡಿಂಕೆ ನಾಯಕಿ ಶಶಿಕಲಾ ನಟರಾಜನ್ ಮತ್ತು ಅವರ ಆಪ್ತೆ ಇಳವರಸಿಗೆ ಎಸಿಬಿ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿದ್ದ ಸಮಯದಲ್ಲಿ ರಾಜಾತಿಥ್ಯ ಪಡೆದ ಆರೋಪ ಶಶಿಕಲಾ ಮೇಲಿದೆ. ಮೂರು ಲಕ್ಷ ರೂ. ಹಣದ ಶ್ಯೂರಿಟಿ ಷರತ್ತು ವಿಧಿಸಿ ನ್ಯಾಯಾಲಯ ಶಶಿಕಲಾ ನಟರಾಜನ್ ಮತ್ತು ಇಳವರಸಿಗೆ ಜಾಮೀನು ಮಂಜೂರು ಮಾಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಶಿಕಲಾ ನಾಲ್ಕು ವರ್ಷಗಳ ಕಾಲ ಪರಪ್ಪನ ಆಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಕಳೆದ ವರ್ಷ ಬಿಡುಗಡೆಯಾಗಿದ್ದರು. ಶಿಕ್ಷಾ ಅವಧಿ ಪೂರೈಸಲು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು. ಜೈಲು ಸೇರಿದ್ದ ಇವರು ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಪಡೆಯಲು ಎರಡು ಕೋಟಿ ರೂಪಾಯಿ ಲಂಚವನ್ನು ಜೈಲಿನ ಅಧಿಕಾರಿಗಳಿಗೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಇದೇ ವಿಚಾರವಾಗಿ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರಿದ್ದ ಏಕಸದಸ್ಯ ಸಮಿತಿ ನೇಮಿಸಿ ವರದಿ ನೀಡಲು ಸರ್ಕಾರ ಸೂಚಿಸಿತ್ತು. ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಣ ನೀಡಿರುವುದರಿಂದ ಎಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು. ಜೈಲಿನಲ್ಲಿ ಇವರಿಗೆ ಐಷಾರಾಮಿ ಸೌಲಭ್ಯ ನೀಡಿದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ನ ಅಂದಿನ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಪೀಠ ಎಸಿಬಿಗೆ ನಿರ್ದೇಶನ ನೀಡಿತ್ತು.
ಇತ್ತೀಚಿಗೆ ಸರ್ಕಾರದ ಅನುಮತಿ ಪಡೆದ ಎಸಿಬಿಯು ಶಶಿಕಲಾ, ಇಳವರಸಿ ಮತ್ತು ಜೈಲು ಸಿಬ್ಬಂದಿಯಾದ ಗಜರಾಜು, ಸುರೇಶ್ ಹಾಗೂ ಇಬ್ಬರು ಅಧಿಕಾರಿಗಳು ಸೇರಿ ಆರು ಜನರ ವಿರುದ್ದ ಚಾರ್ಜ್ಶೀಟ್ ಸಲ್ಲಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಶಿಕಲಾ, ಇಳವರಸಿ, ಗಜರಾಜು ಹಾಗೂ ಸುರೇಶ್ ಎಸಿಬಿ ಕೋರ್ಟ್ಗೆ ಹಾಜರಾಗಿದ್ದರು.ಈ ವೇಳೆ ನಾಲ್ವರು ಆರೋಪಿಗಳಿಗೂ ಐದು ಲಕ್ಷ ಬಾಂಡ್ ಪಡೆದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅಲ್ಲದೇ, ಏ.16ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
ಪಂಜಾಬ್ನಲ್ಲಿ ‘ಆಪ್’ ಇತಿಹಾಸ ಸೃಷ್ಟಿ: ಐದೂವರೆ ತಿಂಗಳು ಗದ್ದುಗೆ ಏರಿದ್ದ ಮೊದಲ ದಲಿತ ಸಿಎಂ ರಾಜೀನಾಮೆ
ಕರಣ್ weds ಹರ್ಷು- ಷರತ್ತು ಅನ್ವಯ: ದಿನಕ್ಕೆ 3 ಸಲ ಐ ಲವ್ ಯೂ… ಬೋನ್ಲೆಸ್ ಚಿಕನ್ ಹೀಗಿರಬೇಕು…