ನವದೆಹಲಿ: ಕರೊನಾ ವೈರಸ್ ಅದೆಷ್ಟೋ ಮಂದಿಯ ಬದುಕನ್ನೇ ಕಸಿದುಕೊಂಡಿರುವುದು ಹೊಸ ವಿಷಯವಲ್ಲ. ಅದರಲ್ಲಿಯೂ ಹೋಟೆಲ್ ಉದ್ಯಮಕ್ಕಂತೂ ಲಾಕ್ಡೌನ್, ಕರೊನಾ ವೈರಸ್ ಭಾರಿ ಪೆಟ್ಟುಕೊಟ್ಟಿದೆ. ಚಿಕ್ಕಪುಟ್ಟ ಡಾಬಾಗಳಲ್ಲಿ ಆಹಾರ ಪೂರೈಕೆ ಮಾಡುವ ಮಹಾನಗರಗಳವರಂತೂ ಅಕ್ಷರಶಃ ನಲುಗಿಹೋಗಿದ್ದಾರೆ.
ಅಂಥದ್ದೇ ಒಂದು ನೋವಿನ ಕಥೆ ದೆಹಲಿಯ ವೃದ್ಧ ದಂಪತಿಯದ್ದು, ಬಾಬಾ ಕಾ ಡಾಬಾ ಹೆಸರಿನಲ್ಲಿ ದಿನನಿತ್ಯವೂ ನೂರಾರು ಮಂದಿಗೆ ಊಟ ಹಾಕುತ್ತಿದ್ದರು ಈ ದಂಪತಿ. ಆದರೆ ಕರೊನಾದಿಂದಾಗಿ ಅವರ ಜೀವನ ಅಕ್ಷರಶಃ ಬೀದಿಗೆ ಬಂದುಬಿಟ್ಟಿತು.
ಡಾಬಾ ಬಂದ್ ಆಗಿದ್ದರಿಂದ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಉಂಟಾಯಿತು. ದೆಹಲಿಯಲ್ಲಿ ಇನ್ನೂ ಪರಿಸ್ಥಿತಿ ಸಂಪೂರ್ಣ ಸಹಜ ಸ್ಥಿತಿಗೆ ಬರದ ಹಿನ್ನೆಲೆಯಲ್ಲಿ ಇವರ ಗೋಳು ಕೇಳುವವರೇ ಇರಲಿಲ್ಲ.
This video completely broke my heart. Dilli waalon please please go eat at बाबा का ढाबा in Malviya Nagar if you get a chance 😢💔 #SupportLocal pic.twitter.com/5B6yEh3k2H
— Vasundhara Tankha Sharma (@VasundharaTankh) October 7, 2020
ಆದರೆ ಇವರ ಅದೃಷ್ಟವೋ ಎನ್ನುವಂತೆ ವಸುಂಧರಾ ಶರ್ಮ ಎನ್ನುವವರು ಇವರ ನೋವಿನ ಕಥೆಯನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡರು. ತಮ್ಮ ಬದುಕು ಹೇಗೆ ಮೂರಾಬಟ್ಟೆಯಾಗಿದೆ ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದಂಪತಿಯ ವಿಡಿಯೋ ಕೂಡ ಹಂಚಿಕೊಂಡರು.
ಅಷ್ಟೇ. ಬಾಬಾ ಕಾ ಡಾಬಾ ಎಂಬ ಹೆಸರಿನ ಈ ಟ್ವಿಟರ್ ಅದೆಷ್ಟು ಮನಕ್ಕೆ ನಾಟಿದೆ ಎಂದರೆ ಬಾಲಿವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಸಾರ್ವಜನಿಕರಿಂದ ಸಹಾಯದ ನೆರವೇ ಹರಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಟಾಪ್ ಟ್ರೆಂಡ್ ಆಗಿರುವ ಈ ಟ್ವೀಟರ್ ಸಾವಿರಾರು ಮನಸ್ಸನ್ನು ಗೆದ್ದುಬಿಟ್ಟಿದೆ.
ಬಾಲಿವುಡ್ ತಾರೆಯರಾದ ರವೀನಾ ಟಂಡನ್, ರಣದೀಪ್ ಹೂಡಾ, ಸ್ವರಾ ಭಾಸ್ಕರ್, ಗೌರವ್ ವಾಸನ್, ರವಿಚಂದ್ರ ಅಶ್ವಿನ್, ಸೋನಂ ಕಪೂರ್ ಸೇರಿದಂತೆ ಹಲವಾರು ಮಂದಿ ನೆರವಿಗೆ ಧಾವಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ ಭಾರತಿ ಅವರೂ ಖುದ್ದು ಡಾಬಾಕ್ಕೆ ಭೇಟಿಕೊಟ್ಟು ಸಹಾಯದ ಭರವಸೆ ನೀಡಿದ್ದಾರೆ.
ಈ ಅನ್ನದಾತರ ಮೊಗದಲ್ಲೀಗ ಸಂತಸ ಮನೆಮಾಡಿದೆ. ಸಾಮಾಜಿಕ ಜಾಲತಾಣದ ಶಕ್ತಿ ಮತ್ತೊಮ್ಮೆ ಜಗಜ್ಜಾಹೀರವಾಗಿದೆ.
ಬೆಂಗಳೂರು ತಲುಪಬೇಕೆನ್ನುವಷ್ಟರಲ್ಲಿ ವಿಮಾನದಲ್ಲೇ ಡೆಲಿವರಿ: ವಿಡಿಯೋ ವೈರಲ್
ಕೆ.ಕಲ್ಯಾಣ್ ಕುಟುಂಬದಲ್ಲಿ ಮರಳಿದ ಸಂತಸ: ವಿಚ್ಛೇದನ ವಾಪಸ್ ಪಡೆಯಲು ಪತ್ನಿ ನಿರ್ಧಾರ?
ಹಾಥರಸ್ ಪ್ರಕರಣ- ಯುವತಿಯ ಕೊಲೆ ಮಾಡಿದ್ದು ಯಾರು ಎಂದು ತಿಳಿಸಿ ಪತ್ರ ಬರೆದ ಆರೋಪಿಗಳು!