More

    ಸಾವಿರಾರು ಮಂದಿಗೆ ಊಟ ಹಾಕುವ ದಂಪತಿ ತುತ್ತು ಅನ್ನಕ್ಕೆ ಪರದಾಡಿದಾಗ… ನಡೆಯಿತೊಂದು ಪವಾಡ!

    ನವದೆಹಲಿ: ಕರೊನಾ ವೈರಸ್​ ಅದೆಷ್ಟೋ ಮಂದಿಯ ಬದುಕನ್ನೇ ಕಸಿದುಕೊಂಡಿರುವುದು ಹೊಸ ವಿಷಯವಲ್ಲ. ಅದರಲ್ಲಿಯೂ ಹೋಟೆಲ್​ ಉದ್ಯಮಕ್ಕಂತೂ ಲಾಕ್​ಡೌನ್​, ಕರೊನಾ ವೈರಸ್​ ಭಾರಿ ಪೆಟ್ಟುಕೊಟ್ಟಿದೆ. ಚಿಕ್ಕಪುಟ್ಟ ಡಾಬಾಗಳಲ್ಲಿ ಆಹಾರ ಪೂರೈಕೆ ಮಾಡುವ ಮಹಾನಗರಗಳವರಂತೂ ಅಕ್ಷರಶಃ ನಲುಗಿಹೋಗಿದ್ದಾರೆ.

    ಅಂಥದ್ದೇ ಒಂದು ನೋವಿನ ಕಥೆ ದೆಹಲಿಯ ವೃದ್ಧ ದಂಪತಿಯದ್ದು, ಬಾಬಾ ಕಾ ಡಾಬಾ ಹೆಸರಿನಲ್ಲಿ ದಿನನಿತ್ಯವೂ ನೂರಾರು ಮಂದಿಗೆ ಊಟ ಹಾಕುತ್ತಿದ್ದರು ಈ ದಂಪತಿ. ಆದರೆ ಕರೊನಾದಿಂದಾಗಿ ಅವರ ಜೀವನ ಅಕ್ಷರಶಃ ಬೀದಿಗೆ ಬಂದುಬಿಟ್ಟಿತು.

    ಡಾಬಾ ಬಂದ್​ ಆಗಿದ್ದರಿಂದ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಉಂಟಾಯಿತು. ದೆಹಲಿಯಲ್ಲಿ ಇನ್ನೂ ಪರಿಸ್ಥಿತಿ ಸಂಪೂರ್ಣ ಸಹಜ ಸ್ಥಿತಿಗೆ ಬರದ ಹಿನ್ನೆಲೆಯಲ್ಲಿ ಇವರ ಗೋಳು ಕೇಳುವವರೇ ಇರಲಿಲ್ಲ.

    ಆದರೆ ಇವರ ಅದೃಷ್ಟವೋ ಎನ್ನುವಂತೆ ವಸುಂಧರಾ ಶರ್ಮ ಎನ್ನುವವರು ಇವರ ನೋವಿನ ಕಥೆಯನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡರು. ತಮ್ಮ ಬದುಕು ಹೇಗೆ ಮೂರಾಬಟ್ಟೆಯಾಗಿದೆ ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದಂಪತಿಯ ವಿಡಿಯೋ ಕೂಡ ಹಂಚಿಕೊಂಡರು.

    ಅಷ್ಟೇ. ಬಾಬಾ ಕಾ ಡಾಬಾ ಎಂಬ ಹೆಸರಿನ ಈ ಟ್ವಿಟರ್​ ಅದೆಷ್ಟು ಮನಕ್ಕೆ ನಾಟಿದೆ ಎಂದರೆ ಬಾಲಿವುಡ್​ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಸಾರ್ವಜನಿಕರಿಂದ ಸಹಾಯದ ನೆರವೇ ಹರಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಟಾಪ್​ ಟ್ರೆಂಡ್​ ಆಗಿರುವ ಈ ಟ್ವೀಟರ್​ ಸಾವಿರಾರು ಮನಸ್ಸನ್ನು ಗೆದ್ದುಬಿಟ್ಟಿದೆ.

    ಬಾಲಿವುಡ್​ ತಾರೆಯರಾದ ರವೀನಾ ಟಂಡನ್​, ರಣದೀಪ್​ ಹೂಡಾ, ಸ್ವರಾ ಭಾಸ್ಕರ್​, ಗೌರವ್​ ವಾಸನ್​, ರವಿಚಂದ್ರ ಅಶ್ವಿನ್​, ಸೋನಂ ಕಪೂರ್​ ಸೇರಿದಂತೆ ಹಲವಾರು ಮಂದಿ ನೆರವಿಗೆ ಧಾವಿಸಿದ್ದಾರೆ. ಆಮ್​ ಆದ್ಮಿ ಪಕ್ಷದ ಶಾಸಕ ಸೋಮನಾಥ ಭಾರತಿ ಅವರೂ ಖುದ್ದು ಡಾಬಾಕ್ಕೆ ಭೇಟಿಕೊಟ್ಟು ಸಹಾಯದ ಭರವಸೆ ನೀಡಿದ್ದಾರೆ.

    ಈ ಅನ್ನದಾತರ ಮೊಗದಲ್ಲೀಗ ಸಂತಸ ಮನೆಮಾಡಿದೆ. ಸಾಮಾಜಿಕ ಜಾಲತಾಣದ ಶಕ್ತಿ ಮತ್ತೊಮ್ಮೆ ಜಗಜ್ಜಾಹೀರವಾಗಿದೆ.

    ಬೆಂಗಳೂರು ತಲುಪಬೇಕೆನ್ನುವಷ್ಟರಲ್ಲಿ ವಿಮಾನದಲ್ಲೇ ಡೆಲಿವರಿ: ವಿಡಿಯೋ ವೈರಲ್​

    ಕೆ.ಕಲ್ಯಾಣ್​ ಕುಟುಂಬದಲ್ಲಿ ಮರಳಿದ ಸಂತಸ: ವಿಚ್ಛೇದನ ವಾಪಸ್​ ಪಡೆಯಲು ಪತ್ನಿ ನಿರ್ಧಾರ?

    ಹಾಥರಸ್​ ಪ್ರಕರಣ- ಯುವತಿಯ ಕೊಲೆ ಮಾಡಿದ್ದು ಯಾರು ಎಂದು ತಿಳಿಸಿ ಪತ್ರ ಬರೆದ ಆರೋಪಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts