ಹೈದರಾಬಾದ್: ಪ್ರಖ್ಯಾತ ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಗು ಚಿತ್ರರಂಗದ ಪ್ರಖ್ಯಾತ ನಿರ್ಮಾಪಕ ಜಿ. ಅಶೋಕ್ ರೆಡ್ಡಿ ಅವರನ್ನು ಹೈದರಾಬಾದ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹೈದರಾಬಾದ್ನ ಎಸ್.ಆರ್. ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಮಧುರನಗರ ಏರಿಯಾದಲ್ಲಿರುವ ಮನೆಯಲ್ಲಿ ಕಳೆದ ಭಾನುವಾರ ಆತ್ಮಹತ್ಯೆ ಸ್ಥಿತಿಯಲ್ಲಿ ಶ್ರಾವಣಿ ಶವ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಟಿಕ್ಟಾಕ್ನಲ್ಲಿ ಪರಿಚಯವಾದ ದೇವರಾಜ್ ಎಂಬ ಯುವಕನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪಾಲಕರು ಆರೋಪಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಶ್ರಾವಣಿ ನಿರ್ಮಾಪಕ ಅಶೋಕ್ ರೆಡ್ಡಿ ಜತೆಯಲ್ಲಿ ಮಾತನಾಡಿದ್ದ ಆಡಿಯೋವೊಂದು ವೈರಲ್ ಆಗಿತ್ತು.
ಇದನ್ನೂ ಓದಿ: IDEO: ವಡಾಪಾವ್ ಒಳಗೆ ಐಸ್ಕ್ರೀಂ ಹಾಕಿದ್ರೆ ಹೇಗಿರತ್ತೆ? ವಾವ್! ಟೇಸ್ಟಿ ಟೇಸ್ಟಿ…
ಇದಾದ ಬೆನ್ನಲ್ಲೇ ಅಶೋಕ್ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿತ್ತು. ಕಳೆದ ಸೋಮವಾರದಿಂದ ಅಶೋಕ್ ರೆಡ್ಡಿ ನಾಪತ್ತೆಯಾಗಿದ್ದ. ಇದೀಗ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ವಿಚಾರಣೆಗೆ ಹಾಜರಾಗುವಂತೆ ಅಶೋಕ್ ರೆಡ್ಡಿಗೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ, ಮೊಬೈಲ್ ಸ್ವಿಚ್ ಆಫ್ ಮಾಡಿ ಮೊಬೈಲ್ ಬಚ್ಚಿಟ್ಟು ಅಶೋಕ್ ರೆಡ್ಡಿ ನಾಪತ್ತೆಯಾಗಿದ್ದರು.
ಅಶೋಕ್, ಶ್ರಾವಣಿ ಪ್ರಕರಣದಲ್ಲಿ ಬಂಧಿಯಾಗಿರುವ 3ನೇ ಆರೋಪಿಯಾಗಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಈಗಾಗಲೇ ಸಾಯಿ ಕೃಷ್ಣರೆಡ್ಡಿ ಮತ್ತು ದೇವರಾಜ್ ರೆಡ್ಡಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಪ್ರಕರಣ ಸಂಬಂಧ ಮಾತನಾಡಿರುವ ಪಶ್ಚಿಮ ವಲಯ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಎ. ಆರ್. ಶ್ರೀನಿವಾಸ್, 2017ರಿಂದ ಅಶೋಕ್ ಮತ್ತು ಶ್ರಾವಣಿ ನಡುವೆ ಪರಿಚಯ ಆರಂಭವಾಯಿತು. ಪ್ರೇಮತೋ ಕಾರ್ತಿಕ್ ಚಿತ್ರದಲ್ಲಿ ಚಿಕ್ಕ ಪಾತ್ರವೊಂದನ್ನು ಶ್ರಾವಣಿಗೆ ಅಶೋಕ್ ಆಫರ್ ಮಾಡಿದ್ದರು. ಹೀಗೆ ದಿನ ಕಳೆದಂತೆ ಅಶೋಕ್ ಮತ್ತು ಶ್ರೀಕೃಷ್ಣ ರೆಡ್ಡಿ ಇಬ್ಬರು ಶ್ರಾವಣಿಯೊಂದಿಗೆ ಸಂಬಂಧ ಹೊಂದಿದ್ದರು ಎಂದಿದ್ದಾರೆ.
ಇದರ ನಡುವೆ ಕಳೆದ ಆಗಸ್ಟ್ನಿಂದ ದೇವರಾಜ್ ರೆಡ್ಡಿ ಎಂಬಾತನೊಂದಿಗೆ ಶ್ರಾವಣಿ ಸಲುಗೆ ಬೆಳೆಸಿಕೊಂಡಿದ್ದನ್ನು ಅಶೋಕ್ ಮತ್ತು ಸಾಯಿ ಕೃಷ್ಣರಿಗೆ ಸಹಿಸಲು ಆಗಿಲ್ಲ. ಅಂದಿನಿಂದ ಇಬ್ಬರು ಶ್ರಾವಣಿ ಮತ್ತು ಆಕೆಯ ಕುಟುಂಬಕ್ಕೆ ಕಿರುಕುಳ ನೀಡಲು ಆರಂಭಿಸಿದ್ದರು. ಅಲ್ಲದೆ, ದೇವರಾಜ್ನಿಂದ ದೂರವಿರುವಂತೆ ಶ್ರಾವಣಿ ಮೇಲೆ ಹಲ್ಲೆಯನ್ನು ಮಾಡಿದ್ದಾರೆಂದು ಶ್ರೀನಿವಾಸ್ ಹೇಳಿದರು.
ಇದನ್ನೂ ಓದಿ: ಜಗತ್ತಿನ ಯಾವ ಶಕ್ತಿಯೂ ಯೋಧರನ್ನು ಗಡಿಯಲ್ಲಿ ತಡೆಯಲು ಸಾಧ್ಯವಿಲ್ಲ- ರಾಜನಾಥ್ ಸಿಂಗ್
ಇದರ ನಡುವೆ ಆರೋಪಿ ದೇವರಾಜ್ನನ್ನು ಬಂಧಿಸಿ ಪೊಲೀಸ್ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ಪ್ರಕರಣ ಹೊಸ ತಿರುವು ಪಡೆದುಕೊಂಡಿತು. ಆರಂಭದಲ್ಲಿ ದೇವರಾಜ್ ಪ್ರಕರಣದ ಮೂರನೇ ಆರೋಪಿಯಾಗಿದ್ದ. ಆದರೆ, ಇದೀಗ ಪ್ರಕರಣ ಪ್ರಮುಖ ಆರೋಪಿ ದೇವರಾಜ್ ಆಗಿದ್ದಾನೆ. ಶ್ರಾವಣಿ ಮತ್ತು ದೇವರಾಜ್ ನಡುವೆ ನಡೆದಿದ್ದ ಫೋನ್ ಸಂಭಾಷಣೆಯಲ್ಲಿ ಅಶೋಕ್ ರೆಡ್ಡಿ ಹಾಗೂ ಸಾಯಿ ಕೃಷ್ಣ ಜತೆಗಿನ ಸಂಬಂಧ ಮತ್ತು ಅವರು ಕುಟುಂಬ ಮತ್ತು ತನಗೆ ನೀಡುತ್ತಿರುವ ಕಿರುಕುಳದ ಬಗ್ಗೆ ತಿಳಿಸಿದ್ದಳು.
ಇತ್ತ ಶ್ರಾವಣಿಯ ಈ ಹಿಂದಿನ ಸಂಬಂಧದ ಬಗ್ಗೆ ತಿಳಿದುಕೊಂಡ ದೇವರಾಜ್ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದನ್ನು ಮುರಿದು, ಆಕೆಯಿಂದ ದೂರವಿರಲು ಪ್ರಯತ್ನಿಸಿದ್ದಾನೆ. ಅಲ್ಲದೆ, ಹಿಂದಿನ ಸಂಬಂಧಗಳನ್ನು ಕೆದಕಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈ ಎಲ್ಲ ವಿಚಾರಗಳಿಂದ ಮನನೊಂದಿದ್ದ ಶ್ರಾವಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಹೇಳಲಾಗಿದೆ. (ಏಜೆನ್ಸೀಸ್)
ಆತ್ಮಹತ್ಯೆಗೆ ಶರಣಾದ ಪ್ರಖ್ಯಾತ ಕಿರುತೆರೆ ನಟಿ: ಬಯಲಾಯ್ತು ಟಿಕ್ಟಾಕ್ ಗೆಳೆಯನ ಕರಾಳ ಮುಖ?!
ನಟಿ ಶ್ರಾವಣಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ನಿರ್ಮಾಪಕರೊಟ್ಟಿಗೆ ಮಾತನಾಡಿದ್ದ ಆಡಿಯೋ ಬಹಿರಂಗ!