ಮ್ಹೋವ್ : ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮ್ಹೋವ್ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಗೆ ಸಂಬಂಧಿಸಿದ 50 ಕೋಟಿ ರೂಪಾಯಿ ಹಗರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇದುವರೆಗೆ 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಇಂದೋರ್ನ ಕಲೆಕ್ಟರ್ ಮನೀಶ್ ಸಿಂಗ್ ಶನಿವಾರ ತಿಳಿಸಿದ್ದಾರೆ.
ಈ ಹಗರಣದ ದೊಡ್ಡ ಮಟ್ಟದ್ದಾಗಿದ್ದು, 100 ಕೋಟಿ ರೂಪಾಯಿಗೂ ಅಧಿಕ ಆಗಬಹುದು ಎಂಬ ಸುಳಿವು ನೀಡಿದ ಅವರು, ತನಿಖೆ ಪ್ರಗತಿಯಲ್ಲಿದೆ. ಆಗಸ್ಟ್ 17ರಿಂದ ಈಚೆಗೆ ಐದು ಎಫ್ಐಆರ್ ದಾಖಲಾಗಿವೆ. ಏಳು ಜನರ ಪೈಕಿ ಒಬ್ಬಾತ ಮೋಹನ್ ಅಗರವಾಲ್, ಆತನ ಪುತ್ರರಾದ ಮೋಹಿತ್ ಮತ್ತು ತರುಣ್ ಎಂಬುವವರಿದ್ದಾರೆ. ಇವರಲ್ಲದೆ ವ್ಯಾಪಾರಿಗಳಾದ ಆಯುಷ್ ಅಗರ್ವಾಲ್, ಲೋಕೇಶ್ ಅಗರವಾಲ್ ಕೂಡ ಸೇರಿದ್ದಾರೆ.
ಇದನ್ನೂ ಓದಿ: ಸಿರಗುಪ್ಪದಲ್ಲಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮದ್ಯದಂಗಡಿ ಮಚ್ಚಿಸಿದ ಅಬಕಾರಿ ಇಲಾಖೆ
ಅಗತ್ಯ ವಸ್ತು ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳ ಪ್ರಕಾರ ಇವರ ವಿರುದ್ಧ ಪ್ರಕರಣ ದಾಖಲಾಗಿವೆ. ಅವರು ಫಲಾನುಭವಿಗಳಿಗೆ ಕಡಿಮೆ ಪ್ರಮಾಣದ ಅಕ್ಕಿ, ಗೋಧಿ, ಸೀಮೆಎಣ್ಣೆ ಕೊಟ್ಟು, ಉಳಿದವನ್ನು ಒಂದೆಡೆ ದಾಸ್ತಾನು ಮಾಡುತ್ತಿದ್ದರು. ಬಳಿಕ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದರು. ದಾಸ್ತಾನು ಮಾಡುವುದಕ್ಕೆ ಮೋಹನ್ ಅಗರವಾಲ್ ಅವರ ಗೋಡೌನ್ ಬಳಕೆಯಾಗಿದೆ. ಅಲ್ಲಿಂದ 635 ಬ್ಯಾಗ್ ಪಡಿತರ ಅಕ್ಕಿ ಮತ್ತು ಇತರೆ ಪಡಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್)