ದೇವನಹಳ್ಳಿ: ಅನಿವಾಸಿ ಭಾರತೀಯ ಸಮಾಜ ಸೇವಕ ಉದ್ಯಮಿ ರೊನಾಲ್ಡ್ ಕೊಲಾಸೋ ಅವರಿಗೆ ಫ್ರಾನ್ಸ್ನ ಯೂರೋಪಿಯನ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ (ಇಐಯು) ನೀಡಿರುವ ಗ್ಲೋಬಲ್ ಲೀಡರ್ ಶಿಪ್ ಆಂಡ್ ಮ್ಯಾನೇಜ್ವೆುಂಟ್ ಡಾಕ್ಟರಲ್ ಸರ್ಟಿಫಿಕೆಟನ್ನು ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರದಾನ ಮಾಡಿದರು.
ಕನ್ನಮಂಗಲ ಗ್ರಾಪಂ ವ್ಯಾಪ್ತಿಯ ಸಾದಹಳ್ಳಿ ಸಮೀಪದ ಕ್ಲಾರ್ಕ್ ಎಕ್ಸಾಟಿಕೋದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಕೋಲಾಸೋ ಅವರು ಮಂಗಳೂರು ಭಾಗದವರಾಗಿದ್ದು, ಅವರು ಒಂದು ಕೈಯಲ್ಲಿ ಕೊಟ್ಟಿದ್ದನ್ನು ಮತ್ತೊಂದು ಕೈಗೆ ಕಾಣಬಾರದು ಎಂಬಂತೆ ದುಡಿಮೆಯ ಒಂದು ಭಾಗವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಿದ್ದಾರೆ. ಹಲವಾರು ದೇವಾಲಯ, ಸರ್ಕಾರಿ ಶಾಲಾ ಕಟ್ಟಡ, ಪೊಲೀಸ್ ಠಾಣೆ, ವಕೀಲರ ಭವನ, ಸರ್ಕಾರಿ ಕಚೇರಿ ಕಟ್ಟಿಸಿಕೊಟ್ಟಿದ್ದಾರೆ. ಬಡ ಮಕ್ಕಳ ಮದುವೆ, ವಿದ್ಯಾಭ್ಯಾಸ ಎಲ್ಲದಕ್ಕೂ ಸಹಾಯ ಮಾಡುತ್ತಾ ಬಂದಿದ್ದಾರೆ ಎಂದು ಸದಾನಂದಗೌಡ ಹೇಳಿದರು.
ಪ್ರತಿಫಲ, ಪ್ರಚಾರ, ರಾಜಕೀಯ ಸ್ಥಾನಮಾನ ಬಯಸದ ಇಂತಹ ಸಮಾಜಸೇವಕರ ಸೇವೆ ಗುರುತಿಸಿ ಪದವಿ ನೀಡಿರುವುದು ಹೆಮ್ಮೆ ಎನಿಸುತ್ತದೆ ಎಂದರು.
ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ನವರತ್ನ ಅಗ್ರಹಾರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸರ್ಕಾರಿ ಶಾಲೆ ನಿರ್ವಿುಸಿಕೊಟ್ಟಿದ್ದಾರೆ. ಈ ಭಾಗದ ಹಲವರು ಗ್ರಾಮಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸಲು ಕೊಳವೆಬಾವಿ ಕೊರೆಸಿಕೊಟ್ಟಿದ್ದಾರೆ. ಹಲವು ಪ್ರಶಸ್ತಿ ಜತೆಗೆ ಮತ್ತೊಂದು ಮಕುಟ ಬಂದಿದೆ. ಇಂತಹ ನಿಸ್ವಾರ್ಥ ಸಮಾಜ ಸೇವಕರಿಗೆ ದೇಶದಿಂದಲೂ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದರು.
ಪ್ಯಾರಿಸ್ ಗ್ಲೋಬೆಲ್ ಅಕಾಡೆಮಿ ನಿರ್ದೇಶಕ ಅಜೇಯ್ದೇಸಾಯಿ, ಪ್ರೊ.ಕೆಇ. ರಾಧಾಕೃಷ್ಣ ಮತ್ತಿತರರು ಇದ್ದರು.