ಶಿವಮೊಗ್ಗ: ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿರುವ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಗುರುವಾರ ರಾಜ್ಯ, ಹೊರರಾಜ್ಯಗಳಲ್ಲೂ ತೆರೆ ಕಂಡಿದೆ. ಅದರಲ್ಲೂ ತೆಲುಗು ಭಾಷೆಯಲ್ಲೂ ಮೂಡಿಬಂದಿದ್ದು ಭದ್ರಾವತಿಯ ಪ್ರತಿಭೆ ಆಶಾ ಭಟ್, ದರ್ಶನ್ಗೆ ನಾಯಕಿಯಾಗಿ ಕಾಣಿಸಿದ್ದಾರೆ.
ಭದ್ರಾವತಿಯ ಸೇಂಟ್ ಚಾಲ್ಸ್ ಕಾನ್ವೆಂಟ್ನಲ್ಲಿ ವಿದ್ಯಾಭ್ಯಾಸ ಆರಂಭಿಸಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಪತ್ಯೇತರ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಆಶಾ ಭಟ್, ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪ್ರತಿನಿಧಿಸಿದ ಹೆಗ್ಗಳಿಕೆ ಪಡೆದಿದ್ದರು. ಆನಂತರ ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ.
ಹಾಲಪ್ಪ ವೃತ್ತದಲ್ಲಿ ಮೆಡಿಕಲ್ ಲ್ಯಾಬ್ ಸೆಂಟರ್ ಹೊಂದಿದ್ದ ಸುಬ್ರಹ್ಮಣ್ಯ, ಶ್ಯಾಮಲಾ ಭಟ್ ದಂಪತಿ ದ್ವಿತೀಯ ಪುತ್ರಿಯಾಗಿದ್ದು ‘ರಾಬರ್ಟ್’ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಸ್ಯಾಂಡಲ್ವುಡ್ಗೆ ಅನಾವರಣ ಮಾಡಲು ಹೊರಟಿದ್ದಾರೆ. 2019ರಲ್ಲಿ ಬಾಲಿವುಡ್ ಚಿತ್ರ ‘ಜಂಗ್ಲಿ’ಯಲ್ಲಿ ದ್ವಿತೀಯ ನಾಯಕಿಯಾಗಿ ನಟಿಸಿದ್ದರು. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದ ನಾಯಕಿಯಾಗಿ, ಅದರಲ್ಲೂ ಸ್ಟಾರ್ ನಟನ ಜತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.