ಕುರುಗೋಡು: ಪಟ್ಟಣದ ಪ್ರಮುಖ ರಸ್ತೆಗಳ ಕಾಮಗಾರಿ ವಿಳಂಬ ಖಂಡಿಸಿ ಸಿಪಿಎಂ ಮುಖಂಡರು ಶುಕ್ರವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಗಳನ್ನು ವಿಸ್ತರಣೆ ಮಾಡುವುದಾಗಿ ಮೂರು ವರ್ಷಗಳಲ್ಲಿ ನಾಲ್ಕು ಬಾರಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಸೂಕ್ತ ಯೋಜನೆ ನಕ್ಷೆ ಸಿದ್ಧಪಡಿಸದೆ ಏಕಾಏಕಿ ರಸ್ತೆಯ ಡಾಂಬರ್ ಕಿತ್ತಿದ್ದಾರೆ. ಮಳೆಗೆ ರಸ್ತೆ ತುಂಬಾ ತಗ್ಗುಗುಂಡಿಗಳು ಬಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ. ಇದರಿಂದ ಅನೇಕ ಅಪಘಾತಗಳು ಸಂಭವಿಸಿವೆ. ಆದ್ದರಿಂದ ರಸ್ತೆ ಕಾಮಗಾರಿ ಆರಂಭಿಸುವವರೆಗೂ ತಾತ್ಕಾಲಿಕವಾಗಿ ಮಣ್ಣು ಹಾಕಿ ರಸ್ತೆ ಸಮತಟ್ಟು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಫಿರೋಜ್ಖಾನ್, ತಾಂತ್ರಿಕ ಕಾರಣಗಳಿಂದ ರಸ್ತೆ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಆರಂಭವಾಗುವವರೆಗೆ ತಾತ್ಕಾಲಿಕವಾಗಿ ಮಣ್ಣು ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಮುಂಖಡರಾದ ಗಾಳಿ ಬಸವರಾಜ, ಸೋಮಪ್ಪ, ಹುಲಿಯಪ್ಪ, ಎ.ತಿಮ್ಮಪ್ಪ, ನಾಗರಾಜ, ಜಯರಾಮ, ಸಿದ್ದಯ್ಯ, ಬಸವರಾಜ ಇತರರಿದ್ದರು.