| ಮಂಜು ಕೊಟಗುಣಸಿ
ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಮನೆಯಲ್ಲಿಯೇ ಕಾಲಕಳೆದಿದ್ದ ರಚಿತಾ ರಾಮ್ ಸದ್ಯ ಚಿತ್ರೀಕರಣ ನಿಮಿತ್ತ ಹೈದರಾಬಾದ್ನಲ್ಲಿದ್ದಾರೆ. ‘ಸೂಪರ್ ಮಚ್ಚಿ’ ಚಿತ್ರದ ಶೂಟಿಂಗ್ ನಡುವೆಯೇ ಒಂದಷ್ಟು ಸಮಯ ಬಿಡುವು ಮಾಡಿಕೊಂಡು ವಿಜಯವಾಣಿ ಜತೆ ಮಾತನಾಡಿರುವ ಡಿಂಪಲ್ ಕ್ವೀನ್, ಕರೊನಾ, ಜೀವನ ಮತ್ತು ಸಿನಿಮಾ ಈ ಮೂರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು: ಲಾಕ್ಡೌನ್ ಆರಂಭವಾದ ಎರಡೇ ದಿನಕ್ಕೆ ಫೋನ್ ಸ್ವಿಚ್ ಆಫ್ ಮಾಡಿದ್ದ ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ವಾರದಿಂದೀಚೆಗೆ ಫೋನ್ ಆನ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳ ಪೈಕಿ ಇನ್ಸ್ಟಾಗ್ರಾಂವೊಂದನ್ನೇ ಬಳಸುವ ರಚಿತಾ, ಅದನ್ನೂ ಲಾಗ್ಔಟ್ ಮಾಡಿಟ್ಟಿದ್ದರು. ಇದೀಗ ಶೂಟಿಂಗ್ಗೆ ಅನುಮತಿ ಸಿಗುತ್ತಿದ್ದಂತೆ ಕೆಲಸಕ್ಕೆ ಹಾಜರಿ ಹಾಕಿದ್ದಾರೆ. ಮೂರು ತಿಂಗಳ ಬಳಿಕ ಮತ್ತೆ ಬಣ್ಣ ಹಚ್ಚಿಕೊಂಡು ಕ್ಯಾಮರಾ ಎದುರಿಸುತ್ತಿದ್ದಾರೆ. ‘ಈಗಾಗಲೇ ಸಿನಿಮಾ ಶೂಟಿಂಗ್ಗೆ ಎಲ್ಲ ಕಡೆ ಅನುಮತಿ ನೀಡಿದ್ದಾರೆ. ಅದರಂತೆ ಮೊದಲಾರ್ಥವಾಗಿ ತೆಲುಗಿನ ‘ಸೂಪರ್ ಮಚ್ಚಿ’ ಸಿನಿಮಾದ ಶೂಟಿಂಗ್ನಲ್ಲಿ ಭಾಗವಹಿಸಿದ್ದೇನೆ. ಕೇವಲ ಶೇ. 10ರಷ್ಟು ಭಾಗದ ಚಿತ್ರೀಕರಣ ಬಾಕಿ ಉಳಿದ ಹಿನ್ನೆಲೆಯಲ್ಲಿ, ನಿರ್ವಪಕರಿಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಪಾಲ್ಗೊಂಡಿದ್ದೇನೆ. ಇನ್ನು 10 ದಿನದ ಶೂಟಿಂಗ್ ಮುಗಿದರೆ ಸಿನಿಮಾ ಮುಕ್ತಾಯ ಆಗಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮಾರ್ಚ್ ನಲ್ಲಿಯೇ ಸಿನಿಮಾ ಮುಗಿದು ಇದೀಗ ಬಿಡುಗಡೆಗೆ ತಯಾರಾಗಿರಬೇಕಿತ್ತು. ಆದರೆ, ಅಂದುಕೊಂಡಂತೆ ಯಾವುದು ಆಗುವುದಿಲ್ಲ’ ಎನ್ನುತ್ತಾರೆ ರಚಿತಾ.
ರಿಸ್ಕ್ ತೆಗೆದುಕೊಳ್ಳಲೇಬೇಕು..: ದಿನದಿಂದ ದಿನಕ್ಕೆ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಿನಿಮಾ ಶೂಟಿಂಗ್ನಲ್ಲಿಯೂ ಒಂದಷ್ಟು ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಚಿತ್ರತಂಡಗಳು ಪಾಲಿಸಬೇಕಿದೆ. ಅದೇ ರೀತಿ ಸದ್ಯ ಶೂಟಿಂಗ್ ಮಾಡಿಕೊಳ್ಳುತ್ತಿರುವ ‘ಸೂಪರ್ ಮಚ್ಚಿ’ ಸೆಟ್ನಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ‘ಸೆಟ್ನಲ್ಲಿ 20 ಮಂದಿ ಟೆಕ್ನಿಷಿಯನ್ಗಳಿಗಷ್ಟೇ ಅನುಮತಿ. ದೇಹದ ಉಷ್ಣಾಂಶ ಸೇರಿ, ಮಾಸ್ಕ್, ಫೇಸ್ ಮಾಸ್ಕ್, ಗ್ಲೌಸ್ ಕಡ್ಡಾಯ. ಸಿನಿಮಾ ಸೀನ್ಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಲೈಫೇ ಒಂದು ರಿಸ್ಕ್ ಆಗಿರುವುದರಿಂದ. ನಿರ್ವಪಕರ ಹಿತದೃಷ್ಟಿಯಿಂದಲೂ ನಾವು ಒಮ್ಮೊಮ್ಮೆ ಗಮನಹರಿಸಬೇಕಾಗುತ್ತದೆ. ಎಷ್ಟು ದಿನ ಅಂತ ಮನೆಯಲ್ಲಿರಲು ಸಾಧ್ಯ. ನಮ್ಮ ಜಾಗೃತಿಯಲ್ಲಿ ನಾವು ಇರಬೇಕು. ನಮ್ಮ ಆರೋಗ್ಕಕ್ಕೆ ನಾವೇ ಹೊಣೆಗಾರರು’ ಎಂಬುದು ರಚಿತಾ ಮಾತು.
ಲಾಕ್ಡೌನ್ನಲ್ಲಿ ಚಿತ್ರರಂಗಕ್ಕೆ ದೊಡ್ಡ ಶಾಕ್: ‘ಚಿತ್ರರಂಗಕ್ಕೆ ಈ 3 ತಿಂಗಳು ನಿಜಕ್ಕೂ ಕರಾಳವಾಗಿತ್ತು. ಇರ್ವನ್ ಖಾನ್, ರಿಷಿ ಕಪೂರ್, ಕನ್ನಡದ ಚಿರು, ಬುಲೆಟ್ ಪ್ರಕಾಶ್, ಬಾಲಿವುಡ್ನ ಸುಶಾಂತ್ ಅವರ ಸಾವು ನಿಜಕ್ಕೂ ಭಯ ಹುಟ್ಟಿಸಿವೆ. ಸಾವು ನಮ್ಮ ಕೈಯಲ್ಲಿಲ್ಲ. ಹಾಗಂತ ಸುಮ್ಮನೇ ಕೂರಲು ಸಾಧ್ಯವಿಲ್ಲ. ನಮ್ಮ ಬಗ್ಗೆ ಕಾಳಜಿ ತೆಗೆದುಕೊಂಡು, ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು’ ಎನ್ನುತ್ತಾರೆ.
ಜುಲೈನಲ್ಲಿ ಕನ್ನಡ ಪ್ರಾಜೆಕ್ಟ್ಗಳಲ್ಲಿ ಭಾಗಿ…: ಮುಂದಿನ 10 ದಿನಗಳ ಕಾಲ ಹೈದರಾಬಾದ್ನಲ್ಲೇ ತಂಗುವ ರಚಿತಾ, ಜುಲೈ ಮಧ್ಯೆ ಕನ್ನಡದ ಹಲವು ಪ್ರಾಜೆಕ್ಟ್ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಜ್ವಲ್ ದೇವರಾಜ್ ಜತೆಗೆ ‘ವೀರಂ’ ಸಿನಿಮಾ ಶೂಟಿಂಗ್ ಪ್ಲಾ್ಯನ್ ನಡೆಯುತ್ತಿದೆ. ಅದರ ಜತೆಯಲ್ಲಿ ‘ಏಪ್ರಿಲ್’ ಚಿತ್ರದ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ದುರದೃಷ್ಟವಶಾತ್ ಚಿರು ಅವರೊಂದಿಗೆ ಒಂದೇ ಒಂದು ದಿನವೂ ಶೂಟಿಂಗ್ನಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಗಲಿಲ್ಲ. ಅವರ ಫೋಟೋಶೂಟ್ ಆಗಿತ್ತು, ಇನ್ನೇನು ಟೀಸರ್ ಶೂಟ್ ಮಾಡುವ ಯೋಜನೆ ಮಾಡಲಾಗಿತ್ತು. ಆದರೆ, ಅದ್ಯಾವುದು ಈಡೇರಲಿಲ್ಲ. ಇನ್ನು ವಿಜಯ್ ಗೌಡ ನಿರ್ದೇಶನದ ‘ಲಿಲ್ಲಿ’ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಶುರುವಾಗಲಿದೆ.’ ಎನ್ನುತ್ತಾರೆ.
ಚಿತ್ರೀಕರಣಕ್ಕೆ ನನ್ನ ಸ್ವಂತ ವಾಹನದಲ್ಲೇ ಬಂದಿದ್ದೇನೆ. 10 ದಿನ ಶೂಟಿಂಗ್ ಮುಗಿಯುತ್ತಿದ್ದಂತೆ, ಮನೆಯಲ್ಲಿಯೇ ಸ್ವಯಂ ಪ್ರೇರಿತ 8 ದಿನ ಕ್ವಾರಂಟೈನ್ನಲ್ಲಿರುತ್ತೇನೆ. ಕುಟುಂಬದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ.
| ರಚಿತಾ ರಾಮ್ ನಟಿ