More

    ದಂತಕಥೆಯಲ್ಲಿ ರಿಷಬ್ ಶೆಟ್ಟಿ; ಹೊಂಬಾಳೆಯ ಹೊಸ ಚಿತ್ರ ಕಾಂತಾರ

    ಬೆಂಗಳೂರು: ಕಳೆದ ಜೂನ್ ತಿಂಗಳಲ್ಲಿ ಹೊಸ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಣ್ಣ ಸುಳಿವೊಂದನ್ನು ನೀಡಿದ್ದರು. ಕಥೆ ರೆಡಿಯಾಗಿದೆ, ಮತ್ತೆ ನಿರ್ದೇಶನ ಮಾಡಲಿದ್ದೇನೆ ಎಂದಿದ್ದರು. ಯಾವ ಶೈಲಿಯ ಸಿನಿಮಾ ಇರಬಹುದು ಎಂದಿದ್ದಕ್ಕೆ ‘ಇದು ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧದ ಕುರಿತ ಸಿನಿಮಾ’ ಎಂದಷ್ಟೇ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಶೀರ್ಷಿಕೆ ಸಹಿತ ಮಾಹಿತಿ ಬಹಿರಂಗವಾಗಿದೆ. ಚಿತ್ರಕ್ಕೆ ‘ಕಾಂತಾರ’ ಎಂಬ ಶೀರ್ಷಿಕೆ ಇಡಲಾಗಿದ್ದು, ಮೊದಲ ಲುಕ್ ಸಹ ಬಿಡುಗಡೆಯಾಗಿದೆ. ಹಾಗಾದರೆ ಏನಿದು ‘ಕಾಂತಾರ’? ಕಾಂತಾರ ಎಂದರೆ ಅಡವಿ, ಅರಣ್ಯ, ಕಾಡು ಎಂಬ ನಾನಾ ಅರ್ಥಗಳಿವೆ.

    ಕಾಡು ಮತ್ತು ಮನುಷ್ಯನ ನಡುವೆ ಇಡೀ ಸಿನಿಮಾ ಸಾಗಲಿದ್ದು, ಕರಾವಳಿ ಭಾಗದ ಕಂಬಳದ ಝುಲಕ್ ಸಹ ಚಿತ್ರದ ಮೊದಲ ಪೋಸ್ಟರ್​ನಲ್ಲಿ ನೋಡಬಹುದಾಗಿದೆ. ಈ ಚಿತ್ರ ನಿರ್ದೇಶನ ಮಾಡುವುದರ ಜತೆಗೆ ನಾಯಕನಾಗಿಯೂ ರಿಷಬ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಹೊಂಬಾಳೆ ಫಿಲಂಸ್ ಸಂಸ್ಥೆಯಡಿ ವಿಜಯ್ ಕುಮಾರ್ ಕಿರಗಂದೂರು, ‘ಕಾಂತಾರ’ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಈ ಸಂಸ್ಥೆಯ 11ನೇ ಚಿತ್ರವಾಗಿ ‘ಕಾಂತಾರ’ ಮೂಡಿಬರಲಿದೆ. ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸಗಳು ಬಹುತೇಕ ಮುಕ್ತಾಯವಾಗಿದ್ದು, ಇದೇ ತಿಂಗಳ 27ರಿಂದ ಮುಹೂರ್ತ ಮುಗಿಸಿ ಶೂಟಿಂಗ್ ಸಹ ಶುರುವಾಗಲಿದೆ. ಹಾಗಾದರೆ, ತಂತ್ರಜ್ಞರು ಯಾರ್ಯಾರು? ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ.

    ಸದ್ಯದ ಮಾಹಿತಿ ಪ್ರಕಾರ ಅಚ್ಯುತ್ ಕುಮಾರ್ ಮತ್ತು ಕಿಶೋರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ರಿಷಬ್ ಶೆಟ್ಟಿ ಕೊನೆಯದಾಗಿ ನಿರ್ದೇಶನ ಮಾಡಿದ್ದು, ‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಚಿತ್ರ. ಅದಾದ ಬಳಿಕ ನಟನೆಯಲ್ಲಿಯೇ ಹೆಚ್ಚು ಸಕ್ರಿಯರಾಗಿ, ಒಂದಷ್ಟು ಸಿನಿಮಾಗಳ ಚಿತ್ರೀಕರಣವನ್ನೂ ಅವರು ಮುಗಿಸಿದ್ದಾರೆ. ಇದೀಗ ‘ಕಾಂತಾರ’ ಮೂಲಕ ಮತ್ತೆ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ.

    ರಾಜ್ಯದಲ್ಲಿ ಮತ್ತೊಬ್ಬ ತಹಸೀಲ್ದಾರ್​ರಿಂದ ಕೋವಿಡ್​ ನಿಯಮ ಉಲ್ಲಂಘನೆ; ಕಾನೂನಿಗೂ ಮೀರಿ ಅದ್ಧೂರಿ ಕಾರ್ಯಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts