ಚಳ್ಳಕೆರೆ: ಪರಿಷ್ಕೃತ ಕನಿಷ್ಠ ವೇತನ ನೀಡುವಂತೆ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರ ಆದೇಶ ಮಾಡಿದ್ದರೂ ಕಾರ್ಮಿಕ ಇಲಾಖೆ ಜಾರಿ ಮಾಡುತ್ತಿಲ್ಲ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.
ಕಾರ್ಮಿಕ ಇಲಾಖೆ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಅಂಗನವಾಡಿ, ಬಿಸಿಯೂಟ, ಪುರಸಭೆ, ಗ್ರಾಮ ಪಂಚಾಯಿತಿ, ಕೈಗಾರಿಕಾ ವಲಯ, ಎಪಿಎಂಸಿ ಮಾರುಕಟ್ಟೆ ಮತ್ತಿತರ ಕಡೆ ಗೌರವಧನಕ್ಕೆ ದುಡಿಯುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕನಿಷ್ಠ ವೇತನ ನೀಡಬೇಕು.
ಕೆಲ ಇಲಾಖೆ ಸಿಬ್ಬಂದಿಗೆ ಕಾರ್ಯ ನಿರ್ವಹಿಸಲು ಮೊಬೈಲ್ ನೀಡಲಾಗಿದೆ. ಇದಕ್ಕೆ ಮಾಸಿಕವಾಗಿ 300ರೂ. ವೆಚ್ಚ ಕೊಡಬೇಕು. ಬಿಪಿಎಲ್ ಕುಟುಂಬದ ಕಾರ್ಮಿಕ ಕುಟುಂಬಗಳಿಗೆ ಕಡಿಮೆ ದರದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಬೇಕು. 11600 ರೂ. ಆದಾಯ ಇರುವ ಕುಟುಂಬಗಳನ್ನು ಬಿಪಿಎಲ್ ಸೌಲಭ್ಯಕ್ಕೆ ಅರ್ಹರೆಂದು ಪರಿಗಣಿಸಬೇಕು.
ಕುಶಲ ಮತ್ತು ವಲಯ ವರದಿಗಳ ವೇತನ ತಾರತಮ್ಯ ಬಗೆಹರಿಸಬೇಕು. ಕಾರ್ಮಿಕ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಆರೋಗ್ಯ ರಕ್ಷಣೆಗೆ ವಿಶೇಷ ಯೋಜನೆ ರೂಪಿಸಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಇಲಾಖೆ ಸಹಾಯಕಿ ರೇಖಾ ಅವರಿಗೆ ಮನವಿ ಸಲ್ಲಿಸಿದರು.