ಕುಷ್ಟಗಿ: ಭಾರತದಲ್ಲಿರುವವರು ಯಾರೂ ಹೊರಗಿನವರಲ್ಲ. ಯಾವುದೇ ಧರ್ಮದವರಿರಲಿ ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಿ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಹೇಳಿದರು.
ಪಟ್ಟಣದ ವಿಜಯಚಂದ್ರಶೇಖರ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಸಂವಿಧಾನದಿಂದ ದೇಶದಲ್ಲಿ ಎಲ್ಲಿಯಾದರೂ ಬದುಕು ಕಟ್ಟಿಕೊಂಡು ಕನಸುಗಳನ್ನು ನನಸು ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ. ಕಾರ್ಯಕ್ಷೇತ್ರ ವಿಸ್ತರಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಭಾರತ ನನ್ನದು, ದೇಶದಲ್ಲಿರುವ ಎಲ್ಲರೂ ನನ್ನವರು ಎಂಬ ವಿಶಾಲ ಮನೋಭಾವ ಬೆಳಸಿಕೊಳ್ಳಬೇಕು.
ಅಡ್ಡ ಹಾದಿ, ಅಸತ್ಯದ ಮಾರ್ಗದಲ್ಲಿ ನಡೆದವರು ರೋಗಗ್ರಸ್ತರಾಗಿದ್ದಾರೆ. ಬಹುತೇಕರು ಜೈಲು ಸೇರಿದ್ದಾರೆ. ಸತ್ಯ ಹಾಗೂ ಧರ್ಮದ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಬಲಹೀನತೆ, ಅಡೆತಡೆಗಳಿಗೆ ದೃತಿಗೆಡದೆ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಶಂಕರ್ ಬಿದರಿ, ಅಂಕ ಗಳಿಸುವುದು ಮುಖ್ಯವಲ್ಲ. ವಿಷಯದ ಮೇಲೆ ಪ್ರಭುತ್ವ ಸಾಧಿಸುವುದು ಬಹು ಮುಖ್ಯ. ತಂದೆ ತಾಯಿಗಳ ಸೇವೆಯೇ ಪರಮಾತ್ಮನ ಸೇವೆ ಎಂಬುದನ್ನು ಮರೆಯದಿರಿ ಎಂದರು.
ಸಂಸ್ಥೆಯ ಮುಖ್ಯಸ್ಥ ಸಿ.ವಿ.ಚಂದ್ರಶೇಖರ, ಟ್ರಸ್ಟಿ ಲಿಂಗನಗೌಡ ಪಾಟೀಲ್, ಬಿಇಡಿ ಕಾಲೇಜಿನ ಪ್ರಾಚಾರ್ಯ ತಿಪ್ಪಾಶೆಟ್ಟಿ, ಸಿಬಿಎಸ್ಸಿ ಶಾಲೆಯ ಪ್ರಾಚಾರ್ಯ ಪ್ರಶಾಂತ ಹಿರೇಮಠ, ಪ್ರಾಥಮಿಕ, ಪ್ರೌಢಶಾಲೆಯ ಮುಖ್ಯಶಿಕ್ಷಕ ಭೀಮರಾವ್ ಕುಲಕರ್ಣಿ ಇದ್ದರು.