ಸಿದ್ದಾಪುರ: ಜೆಸಿಬಿಯಲ್ಲಿ ಮಣ್ಣು ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಜೆಸಿಬಿ ಯಂತ್ರಕ್ಕೆ ಸಿಲುಕಿ ಗಾಯಗೊಂಡ ನಾಗರಹಾವನ್ನು ಅಮ್ಮತ್ತಿಯ ಸ್ನೇಕ್ ರಕ್ಷಣಾ ತಂಡ ರಕ್ಷಿಸಿ ಚಿಕಿತ್ಸೆ ನೀಡಿದೆ.
ಸಿದ್ದಾಪುರ ಸಮೀಪದ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಜೆಸಿಬಿ ಯಂತ್ರದಿಂದ ಮಣ್ಣು ತೆಗೆಯುತ್ತಿದ್ದ ವೇಳೆ ನಾಗರಹಾವೊಂದು ಯಂತ್ರದ ಅಡಿಗೆ ಸಿಲುಕಿ ಗಾಯಗೊಂಡಿದೆ. ಜೆಸಿಬಿ ಚಾಲಕ ಕೂಡಲೇ ಅಮ್ಮತ್ತಿಯ ಸ್ನೇಕ್ ರಕ್ಷಣಾ ತಂಡದ ರೋಷನ್ ಹಾಗೂ ರಾಜೇಶ್ ಗಮನಕ್ಕೆ ತಂದಿದ್ದಾರೆ. ಗಂಭೀರ ಗಾಯಗೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅಮ್ಮತ್ತಿಯ ಪಶು ವೈದ್ಯಕೀಯ ಆಸ್ಪತ್ರೆಗೆ ತಂದ್ದಿು, ಅಲ್ಲಿ ವೈದ್ಯ ನವೀನ್ಕುಮಾರ್ ಹಾವಿಗೆ ಚಿಕಿತ್ಸೆ ನೀಡಿದರು.
ರಕ್ಷಣಾ ತಂಡದ ರಾಜೇಶ್ ಮಾತನಾಡಿ, ನಾಗರಹಾವಿನ ಕೆಲವು ಭಾಗಗಳಲ್ಲಿ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ವೈದ್ಯರ ಸಲಹೆಯಂತೆ ಒಂದು ದಿನಗಳವರೆಗೆ ಹಾವನ್ನು ಮನೆಯಲ್ಲಿರಿಸಿ ನಂತರ ಮಾಲ್ದಾರೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗುತ್ತದೆ ಎಂದರು. ರಕ್ಷಣಾ ತಂಡದ ಸಜೀರ್, ಪವಿತ್ರಾ ಇದ್ದರು.