ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರ ವಿಕಾಸಸೌಧದ 4ನೇ ಮಹಡಿಯಲ್ಲಿರುವ ಕಚೇರಿಯನ್ನು ಸ್ಯಾನಿಟೈಸ್ ಮಾಡಿ ಸೀಲ್ ಮಾಡಲಾಗಿದೆ. ಅಲ್ಲಿ ಐದಾರು ಜನ ಕೆಲಸ ಮಾಡುತ್ತಿದ್ದರು. ಅವರೆಲ್ಲರಿಗೂ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕಳೆದ ಒಂದು ವಾರದಿಂದ ರೇಣುಕಾಚಾರ್ಯ ತಮ್ಮ ಕ್ಷೇತ್ರದಲ್ಲಿ ಇದ್ದ ಕಾರಣ ಅವರು ಈ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರಲಿಲ್ಲ. ಇದನ್ನೂ ಓದಿ: ಶಾಲಾ-ಕಾಲೇಜು ಆರಂಭ, ಆನ್ಲೈನ್ ತರಗತಿ ಬಗ್ಗೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ರೇಣುಕಾಚಾರ್ಯ, ‘‘ನನಗೆ ಬೆಳಗ್ಗೆ ಈ ವಿಷಯ ಗೊತ್ತಾಯ್ತು. ನಮ್ಮ ಕಚೇರಿಯಲ್ಲಿ ಒಬ್ಬನಿಗೆ ಕರೊನಾ ಬಂದಿರುವುದು ನಿಜ. ನಾನು ಕಳೆದ ವಾರ ಕ್ಷೇತ್ರಕ್ಕೆ ಹೋಗಿದ್ದೆ. ಹಾಗಾಗಿ ಆತನ ಸಂಪರ್ಕದಲ್ಲಿ ಇರಲಿಲ್ಲ. ಆತನ ಸಂಪರ್ಕದಲ್ಲಿದ್ದ ಇತರ ಸಿಬ್ಬಂದಿಗೆ ಟೆಸ್ಟ್ ಮಾಡಿಸುತ್ತಿದ್ದೇವೆ. ಕರೊನಾ ಸೋಂಕು ತಗುಲಿರುವ ವ್ಯಕ್ತಿಗೆ ಸುಮಾರು 35 ವರ್ಷ ವಯಸ್ಸು. ಆರೋಗ್ಯವಾಗಿದ್ದಾನೆ. ಮೊನ್ನೆ ಟೆಸ್ಟ್ ಮಾಡಿಸಿದ್ದ. ಇವತ್ತು ರಿಪೋರ್ಟ್ ಬಂದಿದೆ. ನಾನು ನಿನ್ನೆ ರಾತ್ರಿ ಹೊನ್ನಾಳಿಯಿಂದ ಬೆಂಗಳೂರಿಗೆ ಬಂದಿದ್ದೇನೆ. ಆತನ ಸಂಪರ್ಕದಲ್ಲಿ ಇಲ್ಲದ್ದರಿಂದ ನಾನು ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯ ಕಾಣುತ್ತಿಲ್ಲ’’ ಎಂದು ಹೇಳಿದ್ದಾರೆ.
VIDEO| ಸಿಎಂ, ಡಿಸಿಎಂ ಮನೆ ಹತ್ತಿರವೇ ಬಡಿದಾಡಿಕೊಂಡ ಪುಂಡರ ಗ್ಯಾಂಗ್…!