ಬೆಂಗಳೂರು: ಆಂಧ್ರ ಪ್ರದೇಶದಿಂದ ರಕ್ತ ಚಂದನ ಮರಗಳನ್ನು ಕಳ್ಳಸಾಗಣೆ ಮಾಡಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿ 29 ಲಕ್ಷ ರೂ.ಮೌಲ್ಯದ ರಕ್ತ ಚಂದನ ತುಂಡುಗಳು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಎಜಾಜ್ ಷರೀಪ್(44), ಶೌಖತ್(30) ಮತ್ತು ಇಮ್ತಿಯಾಜ್(36) ಬಂಧಿತರು. ಈ ಆರೋಪಿಗಳು, ಕರ್ನಾಟಕ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ರಕ್ತ ಚಂದನ ತುಂಡುಗಳನ್ನು ಆಂಧ್ರಪ್ರದೇಶದ ಕಾಡಿನಿಂದ ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಟಿಗೇನಹಳ್ಳಿ ಗ್ರಾಮದಲ್ಲಿ ಸಂಗ್ರಹಿಸಿದ್ದರು. ಗ್ರಾಹಕರು ಬೇಕೆಂದಾಗ ಮಾರಾಟ ಮಾಡುತ್ತಿದ್ದರು.
ಇದೇ ರೀತಿ ಟಾಟಾ ಏಸ್ ವಾಹನದಲ್ಲಿ ರಕ್ತ ಚಂದನ ಮರಗಳನ್ನು ತುಂಬಿಕೊಂಡು ಮಂತ್ರಿಮಾಲ್ ಬಳಿಯ ಬಿಬಿಎಂಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಮೂವರು ಆರೋಪಿಗಳು ಬಂದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಶೇಷಾದ್ರಿಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನದ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 364 ಕೆಜಿ ತೂಕದ 11 ರಕ್ತ ಚಂದನದ ತುಂಡುಗಳು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.