ಮುಂಬೈ: ಕೇಂದ್ರ ಸರ್ಕಾರ ಈ ಸಲದ ಮುಂಗಡ ಪತ್ರದಲ್ಲಿ ವಿತ್ತೀಯ ಕೊರತೆಯ ಗುರಿಯನ್ನು ಇಳಿಸಿದ ನಂತರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗುರುವಾರ ತನ್ನ ವಿತ್ತೀಯ ನೀತಿಯನ್ನು ಪ್ರಕಟಿಸಿದೆ. ಇದರಂತೆ, ರೆಪೋ ದರದ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿರುವ ಆರ್ಬಿಐ, ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ದರವನ್ನೂ ಯಥಾಸ್ಥಿತಿ ಮುಂದುವರಿಸಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಆರು ಸದಸ್ಯರ ವಿತ್ತೀಯ ನೀತಿ ಸಮಿತಿಯ ಸಭೆಯಲ್ಲಿ ಈ ಅವಧಿಯ ವಿತ್ತೀಯ ನೀತಿಯನ್ನು ಅಂತಿಮಗೊಳಿಸಲಾಗಿದೆ. ಇದರಂತೆ, ರೆಪೋ ದರ ಶೇಕಡ 5.15 ಮುಂದುವರಿಕೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಬೆಳವಣಿಗೆಗೆ ಪೂರಕ ನಿರ್ಣಯ ತೆಗೆದುಕೊಳ್ಳುವ ನೀತಿಯ ಅವಕಾಶವನ್ನು ಮುಕ್ತವಾಗಿ ಇರಿಸಿಕೊಳ್ಳಲಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮಟ್ಟಿಗೆ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 5 ಮುಂದುವರಿಸಲಾಗಿದ್ದು, ಮುಂದಿನ ಹಣಕಾಸು ವರ್ಷಕ್ಕೆ ಇದು ಶೇಕಡ 6 ಆಗಿರಲಿದೆ. ಇದೇ ರೀತಿ, ಹಣದುಬ್ಬರ ದರದ ಔಟ್ಲುಕ್ ಅನ್ನು ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಶೇಕಡ 0.30 ಹೆಚ್ಚಿಸಿದ್ದು, ಶೇಕಡ 5.4-5ರ ದರದಲ್ಲಿ ನಿರೀಕ್ಷಿಸಲಾಗುತ್ತಿದೆ. ಆರು ಸದಸ್ಯರ ಸಮಿತಿ ಒಮ್ಮತದಿಂದ ರೆಪೋದರ, ಜಿಡಿಪಿ ಬೆಳವಣಿಗೆ ದರದ ತೀರ್ಮಾನವನ್ನು ತೆಗೆದುಕೊಂಡಿದೆ.
ಕೇಂದ್ರ ಮುಂಗಡ ಪತ್ರದಲ್ಲಿ ಉಲ್ಲೇಖಿಸಿದ ಆದಾಯ ತೆರಿಗೆ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಕೇಂದ್ರ ಬಜೆಟ್ 2020-21ರಲ್ಲಿ ಆದಾಯ ತೆರಿಗೆ ದರವನ್ನು ತರ್ಕ ಬದ್ಧಗೊಳಿಸಿರುವ ಕ್ರಮವು ಪ್ರಾದೇಶಿಕ ಬೇಡಿಕೆಯನ್ನು ಈಡೇರಿಸುವಂತೆ ಇರಬೇಕು ಮತ್ತು ಗ್ರಾಮೀಣ ಮತ್ತು ಮೂಲಸೌಕರ್ಯದ ಖರ್ಚುವೆಚ್ಚಗಳಿಗೆ ಉತ್ತೇಜನ ನೀಡುವಂತೆ ಇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. (ಏಜೆನ್ಸೀಸ್)