ಮದ್ದೂರು: ರೈತ ಸಂಘ ಬಲಿಷ್ಠವಾದಷ್ಟು ಸರ್ಕಾರದ ವಿರುದ್ಧ ಹೋರಾಟ ನಡೆಸಲು ಅನುಕೂಲವಾಗಲಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಗೂಳೂರು ರಾಮಕೃಷ್ಣ ಹೇಳಿದರು.
ತಾಲೂಕಿನ ಕೊಪ್ಪದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಕೊಪ್ಪ ವೃತ್ತ ಘಟಕ ನಾಮಫಲಕ, ರೈತ ಕಚೇರಿ ಉದ್ಘಾಟನೆ ಹಾಗೂ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತ ಸಂಘದ ಹೋರಾಟದ ಫಲವಾಗಿ ಅನ್ನದಾತರಿಗೆ ಹಲವು ಅನುಕೂಲವಾಗಿದೆ. ಸಂಘ ಬಲಿಷ್ಠವಾದ್ದಷ್ಟು ಸರ್ಕಾರದ ವಿರುದ್ಧ ಹೋರಾಟ ನಡೆಸಲು ಅನುಕೂಲವಾಗಲಿದೆ. ಈ ಉದ್ದೇಶದಿಂದ ಪ್ರತಿ ಗ್ರಾಮದಲ್ಲೂ ರೈತ ಸಂಘದ ಘಟಕಗಳನ್ನು ಆರಂಭಿಸಲು ಮುಂದಾಗಿದ್ದು ಇದಕ್ಕೆ ಎಲ್ಲರೂ ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ರೈತ ಸಂಘಕ್ಕೆ ಸೇರ್ಪಡೆಗೊಂಡರು. ಮುಖಂಡ ಪ್ರಸನ್ನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಪ್ರಧಾನ ಕಾರ್ಯದರ್ಶಿ ವಿನೋದ್ಬಾಬು, ಜಿಲ್ಲಾ ಗೌರವಾಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಜಿ.ಎ.ಶಂಕರ್, ಮೂಡ್ಯ ಚನ್ನೇಗೌಡ ಇದ್ದರು.