ನವದೆಹಲಿ: ಭಾರತದ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾಗೆ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಗೆ ನಾಯಕನ ಜವಾಬ್ದಾರಿ ವಹಿಸಲಾಗಿದೆ. ಪಾಂಡ್ಯಾ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕ್ಯಾಪ್ಟನ್ ಆಗಿ, ಮೊದಲ ಸೀಸನ್ನಲ್ಲೇ ಚಾಂಪಿಯನ್ ಮಾಡಿದ್ದರು. ಹಾರ್ದಿಕ್ ಪಾಂಡ್ಯಾ ತಂಡದ ನಾಯಕನಾಗಿ ತನ್ನ ಸಾಮರ್ಥ್ಯ ಏನು ಎಂಬುವುದನ್ನು ಈಗಾಗಲೇ ನಿರೂಪಿಸಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ, ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿ, ಯುವ ಆಟಗಾರರ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಪಾಂಡ್ಯಾ ಹೆಗಲಿಗೆ ಬಿದ್ದಿತ್ತು.
ಇದೀಗ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡುತ್ತಾ, ಹಾರ್ದಿಕ್ ಪಾಂಡ್ಯಾ ಅವರ ಉತ್ಸಾಹವನ್ನು ಹೊಗಳಿದ್ದಾರೆ. ಅಲ್ಲದೆ ಪಾಂಡ್ಯಾ ಆಟವನ್ನು ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಆಟದ ವೇಳೆ ಅತಿಯಾದ ಉತ್ಸಾಹ ಹೊಂದಿದ್ದಾರೆ. ಇದು ತಂಡದ ಸಹ ಆಟಗಾರರ ಮೇಲೆ ಪ್ರತಿಫಲಿಸುತ್ತದೆ. ಕಪಿಲ್ ದೇವ್ ಕೂಡಾ ನಾಯಕರಾಗಿದ್ದಾಗ ಅತ್ಯುತ್ಸಾಹದಿಂದ ತಂಡ ಮುನ್ನಡೆಸುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಲ್ರೌಂಡರ್ಗಳ ಆಟ ಪ್ರತಿ ಬಾರಿಯೂ ಟಿ-20 ಕ್ರಿಕೆಟ್ ಮಾದರಿಯಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಅದರಲ್ಲೂ ನಾಯಕನಾದವನು ಸೀಮಿತ 20 ಓವರ್ಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತಂಡದ ಗೆಲುವಿನಲ್ಲಿ ಮುಖ್ಯವೆನಿಸುತ್ತವೆ. ಹೀಗಾಗಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಾ ತಂಡ ಮುನ್ನಡೆಸುತ್ತಿರುವುದನ್ನು ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. (ಏಜೆನ್ಸೀಸ್)