ಕೋಲ್ಕತ್ತ: ಪಶ್ಚಿಮಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ ಪ್ರಾಥಮಿಕ ಶಾಲೆಯೊಂದು ತೃಣಮೂಲ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಕಾರಣ ಮಾತ್ರ ‘ಕಮಲ’ ದ ಹೂವು ಇರುವ ಲೋಗೋ.
ರಾನಿಯಾ ಪ್ರೀ ಪ್ರೈಮರಿ ಶಾಲೆಯ ಮಕ್ಕಳ ಸಮವಸ್ತ್ರದ ಮೇಲೆ ಕಮಲದ ಹೂವಿನ ಕಸೂತಿ ಇರುವ ಕಾರಣಕ್ಕೆ ತೃಣಮೂಲ ಕಾಂಗ್ರೆಸ್ ನಾಯಕರು ಕ್ಯಾತೆ ತೆಗೆದಿದ್ದಾರೆ. ಅಲ್ಲದೆ ಅದನ್ನು ತೆಗೆಯುವಂತೆ ಪದೇಪದೇ ಒತ್ತಡ ಹೇರಿದ್ದಾರೆ. ಈ ಬಗ್ಗೆ ಶಾಲೆಯ ಮುಖ್ಯಶಿಕ್ಷಕಿ ಬಿಜಾಲಿ ದಾಸ್ ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಕಮಲ ನಮ್ಮ ರಾಷ್ಟ್ರೀಯ ಹೂವು. ಅದೇ ಕಾರಣಕ್ಕೆ ನಮ್ಮ ಶಾಲೆಯ ಮಕ್ಕಳ ಸಮವಸ್ತ್ರದ ಮೇಲೆ ಕಳೆದ 10-11 ವರ್ಷಗಳಿಂದ ಹೂವಿರುವ ಲೋಗೋವನ್ನು ಕಸೂತಿ ಮಾಡಿಸುತ್ತಿದ್ದೇವೆ. ಆದರೆ ಈಗ ಟಿಎಂಸಿ ಕೌನ್ಸಿಲರ್ ಸೇರಿ ಹಲವು ಮುಖಂಡರು ಇದನ್ನು ವಿರೋಧಿಸುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿದ್ದಾರೆ. ಶಾಲೆ ಮಕ್ಕಳ ಪಾಲಕರು ಯಾರೂ ಕಮಲದ ಹೂವನ್ನು ವಿರೋಧಿಸಿಲ್ಲ. ಆದರೂ ನಾವೀಗ ಲೋಗೋವನ್ನು ಬದಲಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ಸಮವಸ್ತ್ರದ ಮೇಲೆ ಕಮಲದ ಹೂವಿನ ಬದಲು ಸರ್ವ ಶಿಕ್ಷ ಅಭಿಯಾನದ ಲೋಗೋ ಇರಲಿದೆ ಎಂದು ಶಿಕ್ಷಕಿ ಹೇಳಿದ್ದಾರೆ.
ಕಮಲ ರಾಷ್ಟ್ರೀಯ ಹೂವು ಎಂಬುದು ಸತ್ಯ. ಆದರೆ ಬಿಜೆಪಿಯ ಸಂಕೇತ ಕೂಡ ಹೌದು. ಟಿಎಂಸಿ ಯಾವತ್ತೂ ಬಿಜೆಪಿಯ ಕಟ್ಟಾ ವಿರೋಧಿ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಾಯಕರ ಸಂಘರ್ಷ ಸರ್ವೇ ಸಾಮಾನ್ಯ. (ಏಜೆನ್ಸೀಸ್)