ರಾಣೆಬೆನ್ನೂರ: ಹೋಳಿ ಹಬ್ಬದ ನಿಮಿತ್ತ ನಗರದ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಎದುರು ಆಯೋಜಿಸಿದ್ದ 85ನೇ ವರ್ಷದ ರತಿ-ಮನ್ಮಥರನ್ನು ನಗಿಸುವ ಸ್ಪರ್ಧೆಯಲ್ಲಿ ಈ ಬಾರಿಯೂ ಜೀವಂತ ರತಿ-ಮನ್ಮಥರು ನಗಲಾರದೆ ತಮ್ಮ ಮೌನದ ಶಪಥವನ್ನು ಮುಂದುವರಿಸಿದರು.
ಶ್ರೀ ರಾಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಭೀಮಲಿಂಗೇಶ್ವರ ಸೇವಾ ಸಮಿತಿ ಹಾಗೂ ಶಕ್ತಿ ಯುವಕ ಸಂಘದ ವತಿಯಿಂದ ಕುಂದರಿಸಿದ ಜೀವಂತ ರತಿ ಮನ್ಮಥರು ಒಂದು ಬಾರಿಯೂ ನಗು ಚಿಮ್ಮಿಸದೇ ತಮ್ಮ ದಾಖಲೆಯನ್ನು ಹಾಗೆಯೇ ಮುಂದುವರೆಸಿದರು.ನಗಿಸಲು ಹೋದವರೆ ನಗೆಪಾಟಿಲಿಗೆ ಈಡಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಯಾರಿಗೂ ಹೋಳಿ ಬಂಪರ್ ಬಹುಮಾನದ ಮೊತ್ತ 4 ಲಕ್ಷ ರೂ. ದಕ್ಕಲಿಲ್ಲ.
ಈ ಹಿಂದಿನ 64 ವರ್ಷಗಳಂತೆ ಈ ವರ್ಷವೂ ಓಕುಳಿ ಮುನ್ನಾದಿನವಾದ ಮಂಗಳವಾರ ರಾತ್ರಿ 8.30ಕ್ಕೆ ಜೀವಂತ ರತಿ ಮನ್ಮಥ ಪಾತ್ರದಾರಿಗಳನ್ನು ಕುಂದರಿಸಲಾಗಿತ್ತು. ಇವರನ್ನು ನಗಿಸಲೆಂದು ವಿವಿಧ ಪ್ರದೇಶಗಳ ಅಬಾಲವೃದ್ಧರಾಗಿ ಹಲವಾರು ಜನರು ಮುಂಚಿತವಾಗಿಯೇ ಇಲ್ಲಿಗೆ ಬಂದು ಜಮಾಯಿಸಿದ್ದರು.
ಯಾರು ಎಷ್ಟೆ ಪ್ರಯತ್ನಿಸಿದರೂ ರತಿ ಮನ್ಮಥರು ನಗುವಿನ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ಗಂಭೀರವಾಗಿ ಆಸೀನರಾಗಿದ್ದರು. ನಗಿಸಲು ಹೋದವರು ಪೇಚಿಕೆ ಸಿಗುತ್ತಿದ್ದರು. ಒಂದು ಸಲ ನಕ್ಕ ಬಿಡ್ರಪ್ಪಾ ಬೇಕಾರ ಬಹುಮಾನದ ರೊಕ್ಕ ಪೂರ್ತಿ ನೀಮಗ್ ಕೊಡ್ತೆನಿ ಎಂದು ಕೆಲವರು ಆಮಿಷವೊಡ್ಡುವ ಪ್ರಯತ್ನ ಮಾಡಿದರು. ಮಹಿಳೆಯರು ಕೂಡ ಅವರನ್ನು ನಗಿಸಲು ಇನ್ನಿಲ್ಲದ ಪ್ರಯತ್ನ ನಡೆಸಿ ವಿಫಲರಾದರು.