ರಾಮನಗರ: ರೇಷ್ಮೆ ನಗರಿ ರಾಮನಗರದ ಜಿಲ್ಲಾ ಕ್ರೀಡಾಂಗಣ ಶುಕ್ರವಾರ ಸಂಜೆ ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಅದ್ಬುತ ಕ್ಷಣ ಕಣ್ತುಂಬಿಕೊಂಡರು. ಧನುರ್ಮಾಸದ ಮೊದಲ ದಿನವೇ ಶ್ರೀ ವಿಷ್ಣು ನಾಮಸ್ಮರಣೆಯ ಮೂಲಕವೇ ಜಿಲ್ಲಾ ಕೇಂದ್ರದಲ್ಲಿ ಜನತೆ ಮಿಂದೆದ್ದರು.
ತಿರುಪತಿ ತಿರುಮಲ ದೇವಾಲಯದಿಂದ ಆಗಮಿಸಿದ್ದ 80 ಅರ್ಚಕರ ತಂಡವು ಸಂಜೆ 6 ಗಂಟೆ ಸುಮಾರಿಗೆ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ವಿಧಿ ವಿಧಾನಗಳೊಂದಿಗೆ ಚಾಲನೆ ನೀಡಿದರು. ಎರಡೂವರೆ ಗಂಟೆ ನಡೆದ ಕಾರ್ಯಕ್ರಮವನ್ನು ಶಾಂತಚಿತ್ತರಾಗಿ ಕುಳಿತು ವೀಕ್ಷಿಸಿದ ಜನತೆ ನಂತರ ಗೋವಿಂದ ನಾಮಸ್ಮರಣೆ ಮಾಡುತ್ತಾ ಭಕ್ತಿಭಾವದಲ್ಲಿ ಮಿಂದೆದ್ದರು.
ಕಣ್ತುಂಬಿಕೊಂಡ ಜನಸ್ತೋಮ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಆರಂಭಗೊಂಡ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಎಚ್ಡಿಕೆ ದಂಪತಿ ಮತ್ತು ಪುತ್ರ ನಿಖಿಲ್ ಪಾಲ್ಗೊಂಡರು. ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನತೆ ಶ್ರೀನಿವಾಸ ಕಲ್ಯಾಣೋತ್ಸವದಂತಹ ಸುಸಂದರ್ಭಕ್ಕೆ ಸಾಕ್ಷಿ ಆದರು. ಈ ವೇಳೆ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಭಕ್ತರಿಗೆ ತಿರುಪತಿ ಲಾಡು ಮತ್ತು ಪುಳಿಯೋಗರೆ, ಕೇಸರಿ ಬಾತ್ ವಿತರಿಸಲಾಯಿತು.
ತಡವಾಗಿ ಆಗಮನ: ಎಚ್ಡಿಕೆ ತಾಯಿ ಚನ್ನಮ್ಮ ಅವರು ಕಲ್ಯಾಣೋತ್ಸವಕ್ಕೆ ಕೊಂಚ ತಡವಾಗಿ ಆಗಮಿಸಿದರು. ಸಂಜೆ 7 ಗಂಟೆ ಸುಮಾರಿಗೆ ಆಗಮಿಸಿದ ಚೆನ್ನಮ್ಮ ಅವರನ್ನು ಎಚ್ಡಿಕೆ ದಂಪತಿ ಮತ್ತು ಪುತ್ರ ಎದ್ದು ನಿಂತು ಬರಮಾಡಿಕೊಂಡರು. 8 ಗಂಟೆ ಸುಮಾರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾರ್ಯಕ್ರಮ ಸೇರಿಕೊಂಡರು. ನಿಖಿಲ್ ಪತ್ನಿ ರೇವತಿ ಸಹ ತಡವಾಗಿ ಆಗಮಿಸಿದರು. ದೇವರಿಗೆ ಪೂಜೆ ಸಲ್ಲಿಸಿದ ನಿಂತರ ಮೊಮ್ಮೊಗ ನಿಖಿಲ್ ನೆರವಿನೊಂದಿಗೆ ವೇದಿಕೆ ಮುಂಭಾಗಕ್ಕೆ ಬಂದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಜನರಿಗೆ ಕೈ ಜೋಡಿಸಿ ನಮಸ್ಕರಿಸಿ, ನಂತರ ಕೈ ಬೀಸಿ ವೇದಿಕೆಯಿಂದ ನಿರ್ಗಮಿಸಿದರು.
ಊಟದ ವ್ಯವಸ್ಥೆ: ಮಧ್ಯಾಹ್ನದಿಂದಲೇ ಕಾರ್ಯಕ್ರಮಕ್ಕೆ ಬಂದ ಸುಮಾರು ಒಂದು ಲಕ್ಷ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಪಲಾವ್, ಮೊಸರನ್ನ ಮತ್ತು ಮೈಸೂರು ಪಾಕ್ ಊಟ ವಿತರಣೆ ಮಾಡಲಾಯಿತು.
ಶ್ರೀನಿವಾಸ ಕಲ್ಯಾಣೋತ್ಸವವನ್ನು ಜಿಲ್ಲೆ ಮತ್ತು ರಾಜ್ಯದ ಜನರ ಸುಭಿಕ್ಷೆಗಾಗಿ ಹಮ್ಮಿಕೊಳ್ಳಲಾಗಿದೆ. ಹಲವಾರು ಸಂಕಷ್ಟಗಳನ್ನು ಜನತೆ ಎದುರಿಸಿದ್ದು, ಇದರಿಂದ ಎಲ್ಲರಿಗೂ ಮುಕ್ತಿ ದೊರೆಯಲಿ. ಒಳ್ಳೆಯದಾಗಲಿ.
| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
ಈಕೆಯ ಮಾದಕ ಫೋಟೋ, ಉದ್ರೇಕಕಾರಿ ಮೆಸೇಜ್ಗೆ ಬೋಲ್ಡ್ ಆದ ಬಳ್ಳಾರಿ ಶಿಕ್ಷಕನಿಗೆ 4 ವರ್ಷದ ಬಳಿಕ ಎದುರಾಯ್ತು ಸಂಕಷ್ಟ!