ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀರಾಮಮಂದಿರದಲ್ಲಿನ ಪ್ರತಿಷ್ಠಾಪನೆ ನೇತೃತ್ವವನ್ನು ಶಿವಾಜಿ ಪುರೋಹಿತರ ವಂಶಸ್ಥ, ವಾರಾಣಸಿಯ ವೈದಿಕ ಸಂಪ್ರದಾಯದ ವಿದ್ವಾಂಸ, 86 ವರ್ಷದ ಹಿರಿಯ ಪಂಡಿತ್ ಲಕ್ಷ್ಮೀಕಾಂತ ಮಥುರನಾಥ ದೀತ್ ವಹಿಸಲಿದ್ದಾರೆ. ಇವರು ಹದಿನೇಳನೇ ಶತಮಾನದಲ್ಲಿ ಕಾಶಿಯ ಪ್ರಸಿದ್ಧ ವಿದ್ವಾಂಸ, ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ ನೇತೃತ್ವ ವಹಿಸಿದ್ದ ಗಂಗಾಭಟ್ಟ ಅವರ ವಂಶಸ್ಥರು.
ಅಯೋಧ್ಯೆಯ ರಾಮಮಂದಿರದಲ್ಲಿ 2024ರ ಜ. 22ರಂದು ನೆರವೇರಲಿರುವ ರಾಮ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಕಾರ್ಯದ ಮುಂದಾಳತ್ವವನ್ನು ಲಕ್ಷ್ಮೀಕಾಂತ ದೀತ್ ವಹಿಸಲಿದ್ದಾರೆ. ಈ ಪ್ರತಿಷ್ಠಾಪನೆಯಲ್ಲಿ ದೇಶಾದ್ಯಂತದ ವಿವಿಧ ಭಾಗಗಳ ವೇದಪರಿಣತ 121 ವಿದ್ವಾಂಸರು ಭಾಗಿಯಾಗಲಿದ್ದು, ಆ ಪೈಕಿ ವಾರಾಣಸಿಯ 40ಕ್ಕೂ ಅಧಿಕ ವಿದ್ವಾಂಸರು ಇರಲಿದ್ದಾರೆ. ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಜ. 16ರಂದೇ ಕೆಲವೊಂದು ಪೂಜೆ ಆಚರಣೆಗಳು ಆರಂಭವಾಗಲಿವೆ. ಜ. 17ರಂದು ಜಲಯಾತ್ರೆ, ತೀರ್ಥ, ಕಲಶ ಪೂಜೆ, ಕಲಶಯಾತ್ರೆಗಳು ನಡೆಯಲಿವೆ. ಜ. 22ರ ಧಾರ್ಮಿಕ ವಿಧಿ&ವಿಧಾನಗಳಲ್ಲಿ ಲಕ್ಷಿ$್ಮಕಾಂತ ಮಥುರನಾಥ ದೀತ್ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಪುರಾಣದ ಸಂತರು&ದಾರ್ಶನಿಕರು ನನಗೆ ನೀಡಿದ ಆಶೀರ್ವಾದದಿಂದ ಕಾಶಿ ಮತ್ತು ನನಗೆ ರಾಮ ಲಲ್ಲಾನ ಪ್ರತಿಷ್ಠಾಪನೆಯ ಮೇಲ್ವಿಚಾರಣೆ ಜವಾಬ್ದಾರಿ ಲಭಿಸಿದೆ. ಭಗವಾನ್ ರಾಮನ ಆಶೀರ್ವಾದಗಳೊಂದಿಗೆ ನಾನು ನನ್ನ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ.
-ಲಕ್ಷ್ಮೀಕಾಂತ ಮಥುರನಾಥ ದೀತ್
ಮೂರ್ತಿಗಳ ಕೆತ್ತನೆ ಶೇ. 90 ಪೂರ್ಣ
ಅಯೋಧ್ಯೆಯಲ್ಲಿನ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂದಿರದ 3 ಕಡೆ ಶ್ರೀರಾಮನ ಮಗುವಿನ ರೂಪದ 4.3 ಅಡಿಯ ಮೂರು ಮೂರ್ತಿಗಳ ಕೆತ್ತನೆ ನಡೆಯುತ್ತಿದೆ. ಮೂವರು ಕಲಾವಿದರು ಮೂರು ಬೇರೆಬೇರೆ ಶಿಲ್ಪದಲ್ಲಿ ಅವುಗಳನ್ನು ತಯಾರು ಮಾಡುತ್ತಿದ್ದಾರೆ. ಆ ಪೈಕಿ ಒಂದನ್ನು ದೇವರ ಮೂರ್ತಿಯಾಗಿ ಪ್ರತಿಷ್ಠಾಪಿಸಲಾಗುವುದು. ಆ ಮೂರ್ತಿಗಳ ಕೆತ್ತನೆ ಕಾರ್ಯ ಶೇ. 90 ಪೂರ್ಣಗೊಂಡಿದೆ, ಇನ್ನೊಂದು ವಾರದಲ್ಲಿ ಮೂರ್ತಿಗಳು ಸಿದ್ಧವಾಗಲಿವೆ ಎಂದು ರೈ ತಿಳಿಸಿದ್ದಾರೆ. ಮೂರ್ತಿಯನ್ನು ನೆಲಮಹಡಿಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ನೆಲಮಹಡಿ ಬಹುತೇಕ ಪೂರ್ಣಗೊಂಡಿರುವುದರಿಂದ ಪ್ರತಿಷ್ಠಾಪನೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪ್ರತಿಷ್ಠಾಪನೆಗೆ ಕನಿಷ್ಠ 4 ಸಾವಿರ ಸಾಧುಗಳನ್ನು ಆಹ್ವಾನಿಸಲಾಗುವುದು. ಅಲ್ಲದೆ ಐವತ್ತು ದೇಶಗಳಿಂದ ಕನಿಷ್ಠ ಒಬ್ಬರನ್ನು ಪ್ರತಿನಿಧಿಯಾಗಿ ಆಹ್ವಾನಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದ್ದಾರೆ.