ನವದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ ವಿಜೇಂದರ್ ಸಿಂಗ್ ರಾಜಕೀಯ ತೊರೆಯುವುದಾಗಿ ಘೋಷಿಸಿದ್ದಾರೆ. 2019ರಲ್ಲಿ ವಿಜೇಂದರ್ ಸಿಂಗ್ ಕಾಂಗ್ರೆಸ್ ಸೇರಿದ ಅವರ ಈ ದಿಢೀರ್ ನಿರ್ಧಾರ ಹಲವರಲ್ಲಿ ಅಚ್ಚರಿ ಮೂಡಿಸಿದೆ.
ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಅವರು ರಾಜಕೀಯ ತೊರೆಯುತ್ತಿರುವುದಾಗಿ ಘೋಷಿಸಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ವಿಜೇಂದರ್ ರಾಜನೀತಿ ಕೋ ರಾಮ್ ರಾಮ್ ಭಾಯಿ ಎಂದು ಹೇಳುವ ಮೂಲಕ ರಾಜಕೀಯ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ರಾಜಕೀಯದಿಂದ ದೂರ ಉಳಿದಿದ್ದ ವಿಜೇಂದರ್ ಸಿಂಗ್ ಕೊನೆಯದಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದರು. ನವದೆಹಲಿಯಲ್ಲಿ ನಡೆದ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ವಿಜೇಂದರ್ ಭಾಗಿಯಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಹರಿಹಾಯ್ದಿದ್ದರು.
ಇದನ್ನೂ ಓದಿ: ಜೀಪ್-ಲಾರಿ ನಡುವೆ ಭೀಕರ ಅಪಘಾತ; ನಾಲ್ವರು ಮೃತ್ಯು
ನನ್ನ 20 ವರ್ಷಗಳ ಬಾಕ್ಸಿಂಗ್ ಕೆರಿಯರ್ನಲ್ಲಿ ನಾನು ನನ್ನ ದೇಶವನ್ನು ಹೆಮ್ಮೆಪಡುವಂತ ಕೆಲಸ ಮಾಡಿದ್ದೇನೆ. ಈಗ ನನ್ನ ದೇಶವಾಸಿಗಳಿಗಾಗಿ ಏನನ್ನಾದರೂ ಮಾಡಲು ಮತ್ತು ಅವರ ಸೇವೆ ಮಾಡುವ ಸಮಯ ಬಂದಿದೆ. ನಾನು ಈ ಅವಕಾಶವನ್ನು ಸ್ವೀಕರಿಸಲು ಬಯಸುತ್ತೇನೆ ಎಂದು 2019ರಲ್ಲಿ ಕಾಂಗ್ರೆಸ್ ಸೇರುವ ವೇಳೆ ಹೇಳಿದ್ದರು.
2019 ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ದೆಹಲಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ವಿಜೇಂದರ್ ಸಿಂಗ್ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಬಾಕ್ಸರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಸೋಲುಂಡಿದ್ದರು. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಅವರು ರಾಜಕೀಯಕ್ಕೆ ಗುಡ್ಬೈ ಹೇಳಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.