ಅಜ್ಜಂಪುರ: ತಾಲೂಕಿನಲ್ಲಿ ಕೊಯ್ಲಿಗೆ ಬಂದಿದ್ದ ಕಡಲೆ ಬೆಳೆ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಸಂಪೂರ್ಣ ನಾಶವಾಗಿದೆ.
ತಾಲೂಕಿನಲ್ಲಿ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ಗೌರಾಪುರ, ಅಬ್ಬಿನಹೊಳಲು, ಎಂ.ಹೊಸಹಳ್ಳಿ, ಕಾಟಿಗನೆರೆ ಮುಂತಾದ ಗ್ರಾಮಗಳಲ್ಲಿ ಕಡಲೆ ಬೆಳೆ ಬಹುತೇಕ ಕೊಳೆತುಹೋಗಿದೆ.
ಪ್ರತಿ ವರ್ಷ ಒಂದು ಎಕರೆಗೆ 10 ಕ್ವಿಂಟಾಲ್ ಇಳುವರಿ ಬರುತ್ತಿದ್ದ ಕಡಲೆ ಬೆಳೆ ಈ ಬಾರಿ ರೋಗದಿಂದ 40 ಕೆಜಿ ಇಳುವರಿ ಬರುವುದೂ ಕಷ್ಟವಾಗಿದೆ. ಮಳೆಯಿಂದ ಹಲವು ಗ್ರಾಮಗಳಲ್ಲಿ ಸೊರಗು ರೋಗ ಕಾಣಿಸಿಕೊಂಡಿದ್ದು ಎಲ್ಲ ಕಡೆ ಹಬ್ಬುವ ಭೀತಿ ಎದುರಾಗಿದೆ.
ಈ ಹಿಂದೆ ಯಾವತ್ತೂ ಚಳಿಗಾಲದಲ್ಲಿ ಮಳೆ ಬಂದಿರಲಿಲ್ಲ. ಜಮೀನಿನ ಫಲವತ್ತತೆ ಆಧಾರದಲ್ಲಿ ಇಳುವರಿ ಬರುತ್ತಿತ್ತು. ಆದರೆ ಈ ಬಾರಿ ಮಳೆಯಿಂದ ಸಂಪೂರ್ಣ ಬೆಳೆ ನಾಶವಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಸಾಲಗಾರರಾಗಿದ್ದಾರೆ ಎನ್ನುತ್ತಾರೆ ರೈತ ಈಶ್ವರಪ್ಪ.
ಎಕರೆಗೆ 10 ಸಾವಿರ ರೂ.ಗೂ ಅಧಿಕ ಹಣ ಖರ್ಚು ಮಾಡಿರುವ ರೈತನಿಗೆ ಹಾಕಿದ ಬಂಡವಾಳ ಕೂಡ ಸಿಗದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೃಷಿಕರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.