ಶಿವಮೊಗ್ಗ: ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕೃತಕ ನೆರೆ ಸೃಷ್ಟಿಯಾದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಯನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಡಿಸಿ ಕೆ.ಬಿ.ಶಿವಕುಮಾರ್ ಎಚ್ಚರಿಕೆ ನೀಡಿದರು.
ಡಿಸಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಜತೆ ಬುಧವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಮಳೆಗಾಲದ ಪೂರ್ವಸಿದ್ಧತೆ ಸೇರಿ ಹಲವು ವಿಷಯಗಳ ಕುರಿತು ರ್ಚಚಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಎಲ್ಲ ಚರಂಡಿ ಹೂಳು ತೆಗೆಯುವುದು ಸೇರಿ ಸ್ವಚ್ಛತಾ ಕಾರ್ಯವನ್ನು ಆದಷ್ಟು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು.
ಮಳೆಗಾಲದಲ್ಲಿ ಚರಂಡಿ ತುಂಬಿ ಯಾವುದೇ ಕಾರಣಕ್ಕೂ ನೀರು ಹೊರಗೆ ಹರಿಯುವ ಪರಿಸ್ಥಿತಿ ಎಲ್ಲಿಯೂ ಕಾಣಿಸಬಾರದು. ಒಂದು ವೇಳೆ ಕೃತಕ ನೆರೆ ಸೃಷ್ಟಿಯಾದರೆ ಆಯಾ ಮುಖ್ಯಾಧಿಕಾರಿಗಳನ್ನೇ ಹೊಣೆಯನ್ನಾಗಿಸಲಾಗುವುದು ಎಂದರು.
ಮಳೆಗಾಲದಲ್ಲಿ ಪ್ರವಾಹ ಸಾಧ್ಯತೆ ಇರುವ ಗ್ರಾಮಗಳನ್ನು ಗುರುತಿಸುವಂತೆ ಈಗಾಗಲೇ ತಹಸೀಲ್ದಾರ್ಗಳಿಗೆ ಸೂಚನೆ ನೀಡಲಾಗಿದೆ. ಅಂತಹ ಗ್ರಾಮಗಳ ಸಂಖ್ಯೆನುಗುಣವಾಗಿ ಪರಿಹಾರ ಕೇಂದ್ರಗಳಿಗೆ ಈಗಲೇ ಸ್ಥಳವನ್ನು ಗುರುತಿಸಿ ನೋಡಲ್ ಅಧಿಕಾರಿಯನ್ನೂ ನಿಯೋಜಿಸಬೇಕು. ಮಳೆಯಿಂದ ಕೆರೆ ಕಟ್ಟೆ, ನಾಲೆಗಳು ತುಂಬಿ ಅನಾಹುತ ಸಂಭವಿಸಬಹುದಾದ ಸ್ಥಳ ಗುರುತಿಸಬೇಕು ಎಂದು ಹೇಳಿದರು.
ಈ ಹಿಂದಿನ ಮಳೆಗಾಲದ ಅವಧಿಯಲ್ಲಿ ಒಡೆದು ಹೋಗಿ ದುರಸ್ತಿ ಮಾಡಲಾಗಿರುವ ಕೆರೆ ಕಟ್ಟೆಗಳನ್ನು ಈಗಲೇ ಪರಿಶೀಲಿಸಬೇಕು. ತುಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಅವಕಾಶ ನೀಡಬಾರದು. ನೀರಿನ ಒಳ ಹರಿವಿನ ಮೇಲೆ ನಿರಂತರ ನಿಗಾ ಇರಿಸಿ ಜಲಾಶಯದಿಂದ ನೀರು ಬಿಡುವ ಕುರಿತು ನಿರಂತರ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿರಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್ ಮತ್ತಿತರ ಸಾಮಗ್ರಿಗಳು ದಾಸ್ತಾನಿರಿಸಬೇಕು ಎಂದರು.