ಕೂಡ್ಲಿಗಿ: ತಾಲೂಕಿನ ತುಪ್ಪಾಕನಹಳ್ಳಿ ಗ್ರಾಮದಲ್ಲಿ ಸತತ ಮಳೆಗೆ ನೆಂದ ಮನೆಯ ಛಾವಣಿ ಕುಸಿದು ಕೊಟ್ರಮ್ಮ(51) ಸೋಮವಾರ ರಾತ್ರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೊಟ್ರಮ್ಮ ಮತ್ತು ಮಗ ಸಿದ್ದಲಿಂಗ ಸ್ವಾಮಿ ಮನೆಯ ಒಳಗಡೆ ಮಲಗಿದ್ದರು. ಆಕೆಯ ಗಂಡ ರುದ್ರಯ್ಯ ಹೊರಗಡೆ ಮಲಗಿದ್ದರು. ರಾತ್ರಿ 2 ಗಂಟೆ ಸುಮಾರಿಗೆ ಛಾವಣಿ ಕುಸಿದು ಬೀಳುತ್ತಿರುವಾಗ ಸಪ್ಪಳ ಕೇಳಿ ಹೊರಗೆ ಓಡಿ ಬಂದ ಕಾರಣ ಮಗ ಸಿದ್ದಲಿಂಗ ಸ್ವಾಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಳಗೆ ಸಿಲುಕಿದ ಕೊಟ್ರಮ್ಮ ಅಸುನೀಗಿದ್ದಾರೆ. ವಿಷಯ ತಿಳಿದು ತಹಸೀಲ್ದಾರ್ ಟಿ.ಜಗದೀಶ, ತಾಪಂ ಇಒ ಜಿ.ಎಂ. ಬಸಣ್ಣ, ಕೂಡ್ಲಿಗಿ ಪಿಎಸ್ಐ ಶರತ್ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.