ಹೊನ್ನಾಳಿ: ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಮತ್ತು ಹೊನ್ನಾಳಿ ತಾಲೂಕಿನಾದ್ಯಂತ ಸತತವಾಗಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿ ನೀರಿನ ಮಟ್ಟ ದಿನೇದಿನೆ ಏರಿಕೆ ಕಾಣುತ್ತಿದೆ. ಶುಕ್ರವಾರ ನದಿ ನೀರಿನಮಟ್ಟ 6.600 ಮೀಟರ್ನಷ್ಟಿತ್ತು.
ಕಳೆದ ಹದಿನೈದು ದಿನಗಳಿಂದ ಎಲ್ಲೆಡೆ ಜಿಟಿಜಿಟಿ ಮಳೆಯಾಗುತ್ತಿದೆ. ತೋಟಗಾರಿಕೆ ವಾರ್ಷಿಕ ಬೆಳೆಗಳಾದ ಅಡಿಕೆ, ತೆಂಗು, ಮಾವು, ವೀಳ್ಯದೆಲೆ ಸೇರಿದಂತೆ ಅನೇಕ ವಾರ್ಷಿಕ ಬೆಳೆಗಳಿಗೆ ಈ ಮಳೆ ಬಹಳ ಮಹತ್ವದಾಗಿದೆ.
ಆದರೆ, ಅಲ್ಪಾವಧಿ ತರಕಾರಿ ಬೆಳೆಗಳಾದ ಬೀಟ್ರೋಟ್, ಬದನೆ, ಟೊಮ್ಯಾಟೊ, ಹಸಿಮೆಣಸಿನಕಾಯಿ ಸೇರಿದಂತೆ ಅನೇಕ ತರಕಾರಿ ಬೆಳೆಗಳಿಗೆ ಮಳೆ ಇದೇ ರೀತಿ ಮುಂದುವರಿದರೆ ಶೀತ ತಗಲುತ್ತದೆ ಎಂದು ತೋಟಗಾರಿಕೆ ಹಿರಿಯ ನಿರ್ದೇಶಕ ವೀರಭದ್ರಸ್ವಾಮಿ ಮಾಹಿತಿ ನೀಡಿದರು.
ಈಗಾಗಲೇ ಭತ್ತ ಹೊರತುಪಡಿಸಿ ಶೇ. 90ರಷ್ಟು ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಮುಗಿದಿದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಮಾ ತಿಳಿಸಿದರು.
ಮಳೆ ವಿವರ: ಹೊನ್ನಾಳಿ 6.6 ಮಿ.ಮೀ., ಸವಳಂಗ 13.6 ಮಿ.ಮೀ., ಬೆಳಗುತ್ತಿ 15.8 ಮಿ.ಮೀ., ಹರಳಹಳ್ಳಿ 8.2 ಮಿ.ಮೀ., ಗೋವಿನಕೋವಿ 6.4 ಮಿ.ಮೀ., ಸಾಸ್ವೇಹಳ್ಳಿ 6.6 ಮಿಮೀ ಮಳೆಯಾಗಿದೆ.