ರಾಯಚೂರು: ಆಹಾರಧಾನ್ಯಗಳ ಮೇಲೆ ಶೇ.5 ಜಿಎಸ್ಟಿ ತೆರಿಗೆ ವಿಧಿಸುವುದನ್ನು ಖಂಡಿಸಿ ಎಪಿಎಂಸಿ, ಅಕ್ಕಿ ಗಿರಣಿ ಹಾಗೂ ಕಿರಾಣಿ ಅಂಗಡಿಗಳನ್ನು ಶುಕ್ರವಾರ ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಜಿಲ್ಲಾ ವಾಣಿಜ್ಯೋದ್ಯಮ ಸಂಘ, ಗಂಜ್ ವರ್ತಕರ ಸಂಘ, ಅಕ್ಕಿ ಗಿರಣಿ ಮಾಲೀಕರ ಸಂಘ, ಕಿರಣಿ ವರ್ತಕರ ಸಂಘಗಳ ಪದಾಧಿಕಾರಿಗಳು ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರಗೇಶಗೆ ಮನವಿ ಸಲ್ಲಿಸಿ, ಆಹಾರಧಾನ್ಯಗಳ ಮೇಲಿನ ಜಿಎಸ್ಟಿ ರದ್ದುಗೊಳಿಸುವಂತೆ ಒತ್ತಾಯಿಸಿದರು.
ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಆಹಾರ ಧಾನ್ಯಗಳು ಮತ್ತು ಉತ್ಪನ್ನಗಳ ಮೇಲೆ ಶೇ.5 ಜಿಎಸ್ಟಿ ವಿಧಿಸುವ ನಿರ್ಧಾರ ತೆಗೆದುಕೊಂಡಿರುವುದು ಅವೈಜ್ಞಾನಿಕ. ಹೆಚ್ಚಿನ ತೆರಿಗೆ ವಿಧಿಸುವುದರಿಂದ ರೈತರು, ಸಾರ್ವಜನಿಕರು ಮತ್ತು ವರ್ತಕರು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಈಗಾಗಲೇ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದೆ ಆತಂಕದಲ್ಲಿರುವಾಗ ತೆರಿಗೆ ವಿಧಿಸುವುದು ಮತ್ತಷ್ಟು ಸಂಕಷ್ಟಕ್ಕಿಡು ಮಾಡಲಿದೆ. ಇದರಿಂದ ಜನರ ಮೇಲೆ ಆರ್ಥಿಕ ಹೊರೆ ಬೀಳಲಿದ್ದು, ಕೈಗಾರಿಕೆಗಳು, ವರ್ತಕರು ಸಮಸ್ಯೆ ಎದುರಿಸಲಿದ್ದಾರೆ. ಅಕ್ಕಿ ಗಿರಣಿಗಳಿಗೆ ಜಿಎಸ್ಟಿಯಲ್ಲಿ ತೆರಿಗೆ ವಿನಾಯಿತಿ ಘೋಷಿಸಬೇಕು. 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ್ದು ಉತ್ತಮ ಬೆಳವಣಿಗೆಯಾಗಿದೆ. ಜಿಎಸ್ಟಿ ಜಾರಿಯಿಂದ ಎಲ್ಲರಿಗೂ ಸಮಸ್ಯೆಯಾಗಲಿದೆ ಎಂದು ಮನವಿಯಲ್ಲಿ ದೂರಲಾಗಿದೆ.