ರಾಯಚೂರು: ರೈತರು ಮಣ್ಣು ಪರೀಕ್ಷೆ ಮಾಡಿಸುವ ಮೂಲಕ ಅಗತ್ಯ ಪೋಷಕಾಂಶಗಳನ್ನು ಮಾತ್ರ ನೀಡಬೇಕಿದ್ದು, ಶಿಫಾರಸು ಮಾಡಿದ ಬೆಳೆಗಳನ್ನು ಬಿತ್ತುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಎಸ್.ಎನ್.ಭಟ್ ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಎಣ್ಣೆಕಾಳು ಮತ್ತು ಎಣ್ಣೆ ತಾಳೆಗುಚ್ಛ ಪ್ರಾತ್ಯಕ್ಷಿಕೆ ಹಾಗೂ ಸೇಂಗಾದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಸೋಮವಾರ ರೈತರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇಂಗಾ ಬೆಳೆಯಲ್ಲೂ ಪೋಷಕಾಂಶ ನಿರ್ವಹಣೆ ಮಾಡುವುದು ಅಗತ್ಯವಿದ್ದು, ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕೆವಿಕೆ ಮುಖ್ಯಸ್ಥ ಡಾ.ಜಿ.ಎಸ್.ಯಡಹಳ್ಳಿ ಮಾತನಾಡಿ, ಸೇಂಗಾದಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಿದರೆ, ಡಾ.ಜಿ.ಎನ್.ಶ್ರೀವಾಣಿ ಮಾತನಾಡಿ, ಸೇಂಗಾದಲ್ಲಿ ಕೀಟಗಳ ನಿರ್ವಹಣೆ ಬಗ್ಗೆ ಮತ್ತು ಡಾ.ಸಿ.ಅನುಪಮಾ ಮಾತನಾಡಿ, ಸೇಂಗಾ ಕಾಳುಗಳ ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರು.
ಕೃಷಿ ವಿಜ್ಞಾನಿಗಳಾದ ಡಾ.ಕೆ.ಜೆ.ಹೇಮಲತಾ, ಡಾ.ನಾಗರಾಜ, ಡಾ.ಪ್ರಹ್ಲಾದ, ತಾಂತ್ರಿಕ ಸಹಾಯಕ ಮೋಹನ್ಕುಮಾರ್ ಸೇರಿ 50ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.