ಯಾದಗಿರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ 2019ರಲ್ಲಿ ದಾಖಲಾಗಿದ್ದ ಮಾನಹಾನಿ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದ್ದು ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ ಎಂದೇ ಹೇಳಬಹುದು. ಈ ಬಗ್ಗೆ ಮಾತನಾಡಿರುವ ತೇಜಸ್ವಿ ಸೂರ್ಯ ತೀರ್ಪನ್ನು ಸ್ವಾಗತಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ ‘ರಾಹುಲ್ ಗಾಂಧಿ ಇಂದಿನ ಕೇಸ್ ಸೇರಿ ಎರಡು ಪ್ರಕರಣಗಳಲ್ಲಿ ಬೇಲ್ ಮೇಲೆ ಹೊರಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ಭ್ರಷ್ಟಾಚಾರದ ಆರೋಪದಲ್ಲಿ ಕೇಸ್ ನಡಿತಿದೆ. ಅದರಲ್ಲೂ ಬೇಲ್ ತಗೊಂಡಿದ್ದಾರೆ. ಈಗ ಪ್ರಧಾನಿ ಮೋದಿ ವಿರುದ್ದ ಹಗುರವಾಗಿ, ಅವಮಾನವಾಗುವಂತೆ ಮಾತನಾಡಿದ್ದಕ್ಕೆ ಸೂರತ್ ಕೋರ್ಟ್ ಶಿಕ್ಷೆ ಕೊಟ್ಟಿದೆ. ಅಲ್ಲೂ ಕೂಡಾ ಬೇಲ್ ತಗೊಂಡಿದ್ದಾರೆ.
ಈ ದೇಶದ ಪ್ರಧಾನಿ ಆಗಬೇಕೆಂದು ಕನಸು ಕಂಡಿರುವ ರಾಷ್ಟ್ರೀಯ ನಾಯಕರು ರಾಹುಲ್ ಗಾಂಧಿ ಯಾವ ರೀತಿ ಮಾತಾಡಬೇಕು, ಹೇಗೆ ವರ್ತನೆ ಮಾಡಬೇಕು ಅನ್ನೋದನ್ನ ಈಗಲಾದ್ರೂ ಕಲಿಬೇಕು. ಆದರೆ ರಾಹುಲ್ ಗಾಂಧಿ ಅದನ್ನ ಮತ್ತೆ ಮತ್ತೆ ಪುನರಾವರ್ತನೆ ಮಾಡ್ತಿದ್ದಾರೆ. ಮೋದಿ ಅವರ ಬಗ್ಗೆ ಕುರಿತಾಗಿ ಪದೆ ಪದೆ ಬಹಳ ಅವಾಚ್ಯ ಶಬ್ದಗಳನ್ನ ಬಳಸಿದ್ದಾರೆ. ವೈಯಕ್ತಿಕ ಟೀಕೆಗಳನ್ನ ಮಾಡೋದು ಕಾಂಗ್ರೆಸ್ ಪಾರ್ಟಿಗೆ ಹೊಸದಲ್ಲ. ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಮೌತ್ ಕಾ ಸೌದಾಗರ್ ಎಂದು ಸೋನಿಯಾ ಗಾಂಧಿ ಹೇಳಿದ್ದರು.
ಶಿವಶಂಕರ್ ಅಯ್ಯರ್ ನೀಚ ಎಂದು ಕರೆದಿದ್ದರು. 2019ರಲ್ಲಿ ರಾಹುಲ್ ಗಾಂಧಿ ಅದೇ ರೀತಿ ಮಾತನಾಡಿದ್ದಕ್ಕೆ ಕೋರ್ಟ್ ಇವತ್ತು ಶಿಕ್ಷೆ ಕೊಟ್ಟಿದೆ. ಈಗಲಾದ್ರೂ ಪಶ್ಚಾತ್ತಾಪ ಪಟ್ಟು, ಸಾರ್ವಜನಿಕ ಜೀವನದಲ್ಲಿ ಇರಬೇಕಾದ ಸಭ್ಯತೆಯನ್ನ ಅವರು ಕಲಿಯಬೇಕು. ರಾಹುಲ್ ಗಾಂಧಿ ಈ ರೀತಿ ಹೇಳಿಕೆ ಕೊಡುವುದರಿಂದ ಹಾಗೂ ಮೋದಿ ಬಗ್ಗೆ ಕೆಟ್ಟದಾಗಿ ಮಾತಾಡುವುದರಿಂದ, ಜನ ಅವರ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ಕಡಿಮೆ ಆಗುವುದಿಲ್ಲ. ಅದು ಮತ್ತಷ್ಟು ಗಟ್ಟಿಯಾಗುತ್ತಾ ಹೋಗುತ್ತದೆ.
ಮೋದಿ ಅವರ ಮಾತಿನಲ್ಲೇ ಹೇಳೋದಾದ್ರೆ ನಮ್ಮ ಕಮಲ ಅರಳೋದು ಕಾಂಗ್ರೆಸ್ ನವ್ರು ಎರಚುವ ಕೆಸರಿನಲ್ಲಿ. ಆದ್ದರಿಂದ ಅವರು ಮೋದಿ ಅವರ ಮೇಲೆ ಎಷ್ಟೇ ಕೆಟ್ಟ ಶಬ್ದಗಳನ್ನ ಬಳಸಿದರೂ, ಜನರ ಪ್ರೀತಿ ವಿಶ್ವಾಸ ಅಷ್ಟೇ ಗಟ್ಟಿಯಾಗುತ್ತಾ ಹೋಗುತ್ತದೆ. ಹೀಗಾಗಿ ಕೋರ್ಟ್ ಕೊಟ್ಟಿರುವ ತೀರ್ಪನ್ನ ಸ್ವಾಗತಿಸ್ತೇನೆ. ಇನ್ನು ಮೇಲಾದರೂ ರಾಹುಲ್ ಗಾಂಧಿ ಅವ್ರು ತಮ್ಮ ಸ್ಥಾನಕ್ಕೆ ತಕ್ಕಂತೆ ಇರಲಿ’ ಎಂದು ತೇಜಸ್ವಿ ಸೂರ್ಯ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.