ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಿಂಚಿತ್ತೂ ಜ್ಞಾನವಿಲ್ಲದೆ ತಾವು ಎಲ್ಲದರ ಪರಿಣಿತರೆಂದು ಭಾವಿಸಿಕೊಂಡಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಹುಲ್ ಗಾಂಧಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ನೀಟ್(NEET)ಅನ್ನು ಮುಂದೂಡುವಂತೆ ಒತ್ತಾಯಿಸಿದ್ದಕ್ಕಾಗಿ ಗಾಂಧಿ ಅವರನ್ನು ‘ಸೂಡೋ ಎಕ್ಸ್ಪರ್ಟ್'(ಹುಸಿ ತಜ್ಞ) ಎಂದು ಲೇವಡಿ ಮಾಡಿದ್ದಾರೆ.
“ವಿದ್ಯಾರ್ಥಿಗಳ ತೊಂದರೆಗೆ ಸರ್ಕಾರ ಕುರುಡಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ನೀಡಿ. ನೀಟ್ ಪರೀಕ್ಷೆಯನ್ನು ಮುಂದೂಡಿ” ಎಂದು ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ಗೆ ಶಿಕ್ಷಣ ಸಚಿವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಹಲವು ಇತರ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ NEET ಪರೀಕ್ಷೆಗಳನ್ನು ನಡೆಸಬಾರದು ಎಂಬ ಕೆಲವು ವಿದ್ಯಾರ್ಥಿಗಳ ಬೇಡಿಕೆಯನ್ನು ಗಾಂಧಿ ಬೆಂಬಲಿಸಿದ್ದರು.
.@RahulGandhi perceives himself to be an expert on everything without having an iota of knowledge.
Overflowing vanity & misplaced sense of entitlement of a failed crown prince is no alibi to meddle into the schedule of examinations, give undue stress & make the students suffer. https://t.co/xniWpcxWox
— Dharmendra Pradhan (@dpradhanbjp) September 8, 2021
ಇದಕ್ಕೆ, “ಕಿಂಚಿತ್ತೂ ಜ್ಞಾನವಿಲ್ಲದೆ ಹೋದರೂ, ತಾವು ಎಲ್ಲದರ ಪರಿಣಿತರೆಂದು ರಾಹುಲ್ ಗಾಂಧಿ ಭಾವಿಸಿಕೊಂಡಿದ್ದಾರೆ. ವಿಪರೀತ ವ್ಯಾನಿಟಿ ಹೊಂದಿರುವುದು ಮತ್ತು ರಾಜ್ಯಭಾರ ಸಿಕ್ಕಿಲ್ಲದ ಯುವರಾಜನೆಂಬ ಹಕ್ಕಿನ ಭಾವನೆ ಹೊಂದಿರುವುದು ಅವರಿಗೆ ಪರೀಕ್ಷೆಯ ವೇಳಾಪಟ್ಟಿಯ ವಿಷಯದಲ್ಲಿ ಮಧ್ಯಪ್ರವೇಶಿಸಲು ನೆಪ ನೀಡುವುದಿಲ್ಲ. ತನ್ಮೂಲಕ ಅವರು ವಿದ್ಯಾರ್ಥಿಗಳಿಗೆ ಅತಿಯಾದ ಒತ್ತಡ ನೀಡಲು ಮತ್ತು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಲು ಸಾಧ್ಯವಿಲ್ಲ” ಎಂದು ಪ್ರಧಾನ್ ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ 12 ಕ್ಕೆ ನಿಗದಿಯಾಗಿರುವ ನೀಟ್ ಪರೀಕ್ಷೆಯನ್ನು ರೀಶೆಡ್ಯೂಲ್ ಮಾಡಬೇಕೆಂಬ ಕೆಲವು ವಿದ್ಯಾರ್ಥಿಗಳ ಅಹವಾಲನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಕೂಡ, ಮಧ್ಯಪ್ರವೇಶಿಸುವುದು ಎಲ್ಲಾ ವಿದ್ಯಾರ್ಥಿಗಳ ದೃಷ್ಟಿಯಿಂದ ಸೂಕ್ತವಲ್ಲ ಎಂದಿದೆ. ಹೀಗಿರುವಾಗ, ರಾಹುಲ್ ಗಾಂಧಿ ಅವರು ಕೋರ್ಟ್ ಮತ್ತು ವಿಷಯ ತಜ್ಞರ ಅಭಿಪ್ರಾಯವನ್ನು ಪ್ರಶ್ನಿಸಬಲ್ಲ ‘ಸೂಡೋ ಎಕ್ಸ್ಪರ್ಟ್’ ಹೇಗಾಗಿದ್ದಾರೆ ಎಂದು ಪ್ರಧಾನ್ ವ್ಯಂಗ್ಯಪ್ರಶ್ನೆ ಹಾಕಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, “ತಮಗೆ ಅರಿವಿಲ್ಲದ ವಿಚಾರಗಳ ಬಗ್ಗೆ ಮಾತಾಡುವ ಬದಲು, ಯುವರಾಜರು ಸುಳ್ಳುಗಳನ್ನು ಹೆಣೆಯುವ ತಮ್ಮ ಚಾಕಚಕ್ಯತೆಗೆ ಸೀಮಿತವಾಗಿದ್ದರೆ ಮೇಲು” ಎಂದೂ ಪ್ರಧಾನ್ ಕುಟುಕಿದ್ದಾರೆ. (ಏಜೆನ್ಸೀಸ್)
VIDEO| ಪಿಎಚ್ಡಿ, ಡಿಗ್ರಿಗಳಿಗೆ ಯಾವುದೇ ಮೌಲ್ಯವಿಲ್ಲ ಎಂದ ಶಿಕ್ಷಣ ಸಚಿವ!