ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ಡ್ರಾವಿಡ್ ಕೋಪ ಮಾಡಿಕೊಳ್ಳುವಂತಹ ವ್ಯಕ್ತಿಯೇ ಅಲ್ಲ. ಆದರೆ, ಒಮ್ಮೆ ಮಹೇಂದ್ರ ಸಿಂಗ್ ಧೋನಿ ಮೇಲೆ ಅತಿಯಾದ ಕೋಪ ಹೊರಹಾಕಿದ್ದರಂತೆ. ಈ ಘಟನೆಯನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಇದೀಗ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ.
ರಾಹುಲ್ ಡ್ರಾವಿಡ್ ಕಾಣಿಸಿಕೊಂಡಿರುವ ಜಾಹಿರಾತು ಒಂದರಲ್ಲಿ ಅವರು ತುಂಬಾ ಕೋಪಿಷ್ಠರಂತೆ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ನಾನು ಇಂದಿರಾ ನಗರದ ಗೂಂಡಾ ಎಂಬ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಡ್ರಾವಿಡ್ ಅವರು ಜಾಹಿರಾತಿನಲ್ಲಿ ಕಾಣಿಸಿಕೊಂಡ ರೀತಿಯನ್ನು ನೋಡಿ ಸೆಲಿಬ್ರೆಟಿಗಳು ಸೇರಿದಂತೆ ಎಷ್ಟೋ ಮಂದಿ ಹುಬ್ಬೇರಿಸಿದ್ದಾರೆ. ಏಕೆಂದರೆ, ಎಂದೂ ಕೂಡ ಡ್ರಾವಿಡ್ ಅವರನ್ನು ಈ ರೀತಿ ಯಾರು ನೋಡಿರಲಿಲ್ಲ.
ಇದನ್ನೂ ಓದಿರಿ: ಹಾಸನದಲ್ಲಿ ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ಜೆಡಿಎಸ್ ಬೆಂಬಲಿಗರಿಂದ ಕಲ್ಲು ತೂರಾಟ..!
ಆದರೆ, ಡ್ರಾವಿಡ್ ಒಮ್ಮೆ ಕೋಪಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ ಎಂದು ಸೆಹ್ವಾಗ್ ಹೇಳಿದ್ದಾರೆ. ಇದಕ್ಕೆ 2006ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವೇ ಸಾಕ್ಷಿ ಎಂದಿದ್ದಾರೆ. ಈ ವೇಳೆ ಧೋನಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದರು. ನಾವು ಪಾಕ್ ಪ್ರವಾಸದಲ್ಲಿದ್ದೆವು. ಡ್ರಾವಿಡ್ ತಂಡದ ನಾಯಕರಾಗಿದ್ದರು. ಧೋನಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ನೀಡಿ ಔಟಾಗಿದ್ದಕ್ಕೆ ಡ್ರಾವಿಡ್ ಗರಂ ಆಗಿದ್ದರು ಎಂದಿದ್ದಾರೆ.
ನೀನು ಆಡುವ ರೀತಿ ಇದೇನಾ? ನೀನು ಖಂಡಿತವಾಗಿ ಆಟವನ್ನು ಮುಗಿಸಲೇಬೇಕು ಎಂದು ಕೂಗಾಡಿದ್ದರು. ಡ್ರಾವಿಡ್ ಅವರ ಇಂಗ್ಲಿಷ್ ಆಕ್ರೋಶದಿಂದ ನಾನು ಆಘಾತಕ್ಕೆ ಒಳಗಾದೆ. ಆದರೂ ಅವರು ಕೂಗಾಡಿದ್ದರಲ್ಲಿ ಅರ್ಧದಷ್ಟು ನನಗೆ ಅರ್ಥವಾಗಲಿಲ್ಲ ಎಂದು ಸೆಹ್ವಾಗ್ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ನಾಯಕನ ಆಕ್ರೋಶದ ಮಾತುಗಳ ಪರಿಣಾಮ ಯುವ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆಗಿದ್ದ ಧೋನಿ ಮುಂದಿನ ಪಂದ್ಯದಲ್ಲಿ ತನ್ನ ತಲೆಯನ್ನು ಮೇಲೆತ್ತಲೇ ಇಲ್ಲ ಮತ್ತು ಬ್ಯಾಟಿಂಗ್ ಮಾಡುವಾಗ ಹೆಚ್ಚು ಬಿರುಸಿನ ಹೊಡೆತಕ್ಕೆ ಧೋನಿ ಯತ್ನಿಸಲೇ ಇಲ್ಲ. ನಾನು ಧೋನಿ ಬಳಿ ಹೋಗಿ ಏನಾಯಿತು ಎಂದು ಕೇಳಿದೆ. ಅದಕ್ಕೆ ಡ್ರಾವಿಡ್ರಿಂದ ಮತ್ತೊಮ್ಮೆ ಬೈಯಿಸಿಕೊಳ್ಳಲು ನನಗೆ ಇಷ್ಟವಿಲ್ಲ ಎಂದರು. ಆಟವನ್ನು ಸದ್ದಿಲ್ಲದೆ ಮುಗಿಸಿ ಹಿಂದಿರುಗೋಣ ಎಂದರು ಎಂದು ಸೆಹ್ವಾಗ್ ಮೆಲಕು ಹಾಕಿದರು. (ಏಜೆನ್ಸೀಸ್)
ಇದನ್ನೂ ಓದಿರಿ: ಪೊಲೀಸ್ ಅಧಿಕಾರಿಯನ್ನೇ ಥಳಿಸಿ ಕೊಂದರು: ಮಗನ ಸಾವಿನ ಸುದ್ದಿ ಕೇಳಿ ತಾಯಿ ನಿಧನ
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ