ಚೆನ್ನೈ: ಉಪ ಕ್ಷೇತ್ರಾಭಿವೃದ್ಧಿ ಅಧಿಕಾರಿ (ಬಿಡಿಒ)ಗೆ ಚಪ್ಪಲಿಯಲ್ಲಿ ಬಾರಿಸಿದ ಆರೋಪ ಮೇಲೆ ತಮಿಳುನಾಡಿನ ಕಡಲೂರು ಜಿಲ್ಲೆಯ ಕನದಮಂಗಲಂ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆಯನ್ನು ಬಂಧಿಸಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಬಂಧಿತ ಉಪಾಧ್ಯಕ್ಷೆಯನ್ನು ಸರಣ್ಯ ಕುಮಾರ್ ಎಂದು ಗುರುತಿಸಲಾಗಿದೆ. ಮೇ 1ರ ಭಾನುವಾರದಂದು ಆರೋಪಿಯನ್ನು ಬಂಧಿಸಲಾಗಿದೆ. ಭಾನುವಾರ ಮಧ್ಯಾಹ್ನ ಪಂಚಾಯಿತಿ ಅಧ್ಯಕ್ಷೆ ಕೆ. ಶಿವಗಾಮಿ ಆಯೋಜಿಸಿದ್ದ ಹಾಗೂ 300 ಜನರು ಭಾಗವಹಿಸಿದ್ದ ಗ್ರಾಮ ಸಭೆಯಲ್ಲಿ ಸರಣ್ಯ ಅವರು ಉಪ ಕ್ಷೇತ್ರಾಭಿವೃದ್ಧಿ ಅಧಿಕಾರಿ ರವಿಶಂಕರ್ ಅವರಿಗೆ ಚಪ್ಪಲಿಯಲ್ಲಿ ಬಾರಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದವರು ಹೇಳುವ ಪ್ರಕಾರ ಅಧ್ಯಕ್ಷೆ ಶಿವಾಗಾಮಿ ಮತ್ತು ಉಪಾಧ್ಯಕ್ಷೆ ಸರಣ್ಯ ನಡುವೆ ಹಿಂದಿನಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಶಿವಾಗಾಮಿ ಮಗ ಶಂಕರ್ ಮತ್ತು ಉಪ ಕ್ಷೇತ್ರಾಭಿವೃದ್ಧಿ ಅಧಿಕಾರಿ ರವಿಶಂಕರ್ ಬೆದರಿಕೆ ಹಾಕಿದ್ದಲ್ಲದೆ, ಗ್ರಾಮ ಪಂಚಾಯಿತಿಯ ಪಾಸ್ಬುಕ್ ನೀಡಲು ತಿರಸ್ಕರಿಸಿದರು ಎಂದು ಸರಣ್ಯ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸರಣ್ಯ ಅತ್ಯಂತ ಹಿಂದುಳಿದ ವರ್ಗದ ಸಮುದಾಯ ವಣ್ಣಿಯರ್ ಸಮುದಾಯಕ್ಕೆ ಸೇರಿದ್ದರೆ, ಪಂಚಾಯಿತಿ ಅಧ್ಯಕ್ಷೆ ಮತ್ತು ಉಪ ಕ್ಷೇತ್ರಾಭಿವೃದ್ಧಿ ಅಧಿಕಾರಿ ಇಬ್ಬರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಆರೋಪಿ ಸರಣ್ಯ ವಿರುದ್ಧ ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಸೇವಕನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಆಕ್ರಮಣ ಅಥವಾ ಬಲ ಪ್ರಯೋಗ) ಮತ್ತು 355 (ಯಾವುದೇ ವ್ಯಕ್ತಿಯ ಮೇಲೆ ಯಾರು ಬಲವನ್ನು ಪ್ರಯೋಗಿಸುವುದು ಅಥವಾ ಆಕ್ರಮಣ ಮಾಡುವ ಮೂಲಕ ಉದ್ದೇಶದಿಂದ ಅವಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಪಾಧ್ಯಕ್ಷೆಯನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. (ಏಜೆನ್ಸೀಸ್)
ಸುಳ್ಳು ಮಾಹಿತಿ ನೀಡಿದ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿದ ಚಾಮರಾಜನಗರದ ಜಿಲ್ಲಾಧಿಕಾರಿ
ಕಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದ ಮುಂಬರುವ ಮಾರ್ಚೆ ಡು ಫಿಲ್ಮ್ನಲ್ಲಿ ಭಾರತಕ್ಕೆ ಗೌರವ ರಾಷ್ಟ್ರ ಸ್ಥಾನಮಾನ
ಸೇತುವೆ ಕೆಳಗೆ ಸಿಲುಕಿಕೊಂಡ ಬೃಹತ್ ಕಂಟೈನರ್ ಟ್ರಕ್: ಚಾಲಕ ಕೊಟ್ಟ ಕಾರಣವಿದು….