ಬೆಂಗಳೂರು: ಗುರುವಾರ ರಾತ್ರಿ ಬೆಂಗಳೂರಿನ ಸದಾಶಿವನಗರದ ಪಬ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಿಯರ್ ಬಾಟಲಿಯಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಬಿಗ್ಬಾಸ್ ನಾಲ್ಕನೇ ಆವೃತ್ತಿಯ ರನ್ನರ್ ಅಪ್ ಕಿರಿಕ್ ಕೀರ್ತಿ ದಿಗ್ವಿಜಯ ನ್ಯೂಸ್ಗೆ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ರಾತ್ರಿ ನಾನು ಮತ್ತು ನನ್ನ ಸ್ನೇಹಿತರು ಪಬ್ನಲ್ಲಿದ್ದೆವು. ನಿರ್ಮಾಪಕರೊಬ್ಬರು ಬಂದಿದ್ದರು. ಮೀಟಿಂಗ್ ಮಾಡುತ್ತಿದ್ದೆವು. ರಾತ್ರಿ 10.45ರವರೆಗೆ ನಮ್ಮ ಜತೆಯಲ್ಲಿದ್ದರು. ನಿರ್ಮಾಪಕರು ಮಾತು ಮುಗಿಸಿ ಹೊರಡುತ್ತಿದ್ದಂತೆ ನನ್ನ ಸ್ನೇಹಿತರೊಟ್ಟಿಗೆ ಮಾತನಾಡಲು ಕುಳಿತುಕೊಂಡೆ. ಇದಾದ ಎರಡೇ ನಿಮಿಷದಲ್ಲಿ ಪಕ್ಕದ ಟೇಬಲ್ನಿಂದ ಒಬ್ಬ ವ್ಯಕ್ತಿ ನೇರವಾಗಿ ನನ್ನ ಬಳಿ ಬಂದ. ಎರಡು ನಿಮಿಷ ನಿನ್ನ ಜತೆಯಲ್ಲಿ ವೈಯಕ್ತಿಕವಾಗಿ ಮಾತನಾಡಬೇಕು ಬಾ ಎಂದು ಕರೆದ. ನೀನು ಯಾರು ಅಂತಾನೇ ಗೊತ್ತಿಲ್ಲ, ನಿನ್ನ ಜತೆ ಮಾತನಾಡುವಂತಹದ್ದು ಏನಿದೆ ಎಂದು ಪ್ರಶ್ನಿಸಿದೆ. ಅದೆಲ್ಲ ಗೊತ್ತಿಲ್ಲ ನಾನು ಮಾತನಾಡಬೇಕು ಬಾ ಎಂದು ಒತ್ತಾಯ ಮಾಡಿದ. ಬಾ ಇಲ್ಲೇ ಪಕ್ಕದಲ್ಲೇ ಕುಳಿತುಕೊಂಡು ಮಾತನಾಡೋಣ ಎಂದು ಕರೆದೆ. ಹಾಗೋದಿಲ್ಲ ಒಳ್ಳೆಯ ಮಾತಿನಲ್ಲೇ ಹೇಳುತ್ತಿದ್ದೇನೆ ಪಕ್ಕಕ್ಕೆ ಬಂದು ಮಾತನಾಡು ಎಂದು ಕೇಳಿದ.
ಆತ ಮದ್ಯದ ಅಮಲಿನಲ್ಲಿ ಇದ್ದಿದ್ದರಿಂದ ಕಿರಿಕ್ ಮಾಡಿಕೊಳ್ಳೋದು ಯಾಕೆ ಅಂತಾ ಪಕ್ಕದ ಟೇಬಲ್ ಬಳಿ ಕರೆದು ಕೂರಿಸಿಕೊಂಡು ಮಾತನಾಡುವಂತೆ ಹೇಳಿದೆ. ನಾನು ಯಾರು ಗೊತ್ತಲ್ಲ? ಎಂದು ಪ್ರಶ್ನಿಸಿದ. ಅದಕ್ಕೆ ಗೊತ್ತಿಲ್ಲ ಎಂದು ಉತ್ತರಿಸಿದೆ. ನೀನ್ಯಾರು ಅಂತಾ ನನಗೂ ಗೊತ್ತಿಲ್ಲ ಹೋಗಲೇ ಎಂದು ಕೆಟ್ಟ ಪದದಲ್ಲಿ ನಿಂದಿಸಿದ. ಆದರೂ, ಸಮಾಧಾನ ಮಾಡಿಕೊಂಡು ತುಂಬಾ ಕುಡಿದಿದ್ದೀಯಾ ಅನ್ಸುತ್ತೆ ಈ ರೀತಿಯಲ್ಲ ಮಾಡಬಾರದು, ಮನೆಗೆ ಹೋಗು ಎಂದು ಬುದ್ಧಿವಾದ ಹೇಳಿದೆ. ಆತನ ಸ್ನೇಹಿತನೊಬ್ಬ ಇದನೆಲ್ಲ ವಿಡಿಯೋ ಮಾಡುತ್ತಿದ್ದ. ಕುಳಿತು ನಗಾಡಿಕೊಂಡು ವಿಡಿಯೋ ಮಾಡುತ್ತಿದ್ದ. ನನ್ನ ಖಾಸಗಿ ವಿಚಾರವಾದ್ದರಿಂದ ನಾನು ಅನುಮತಿ ಇಲ್ಲದೆ ವಿಡಿಯೋ ಯಾಕೆ ಮಾಡುತ್ತಿದ್ದೀಯ ಎಂದು ಪ್ರಶ್ನೆ ಮಾಡಿ, ಆತನಿಂದ ಮೊಬೈಲ್ ಕಿತ್ತುಕೊಂಡೆ.
ಇದಾದ 10 ಸೆಕೆಂಡ್ಗಳಲ್ಲಿ ಒಂದರ ಹಿಂದೆ ಒಂದಂತೆ ಮೂರು ಬಾಟಲಿಗಳಿಂದ ಹಲ್ಲೆ ಮಾಡಿದರು. ತಲೆಗೆ ಮತ್ತು ಕೈ ಅಡ್ಡ ನೀಡಿದ್ದಕ್ಕೆ ಕೈಗೆ ಬಿತ್ತು. ಯಾಕೆ ಹೊಡೆದರು ಅನ್ನೋದು ಕೂಡ ಗೊತ್ತಿಲ್ಲ. ಅಪರಿಚಿತ ಹಾಗೂ ನನ್ನ ನಡುವೆ ಒಂದೂವರೆಯಿಂದ ಎರಡು ನಿಮಿಷ ಮಾತುಕತೆ ನಡೆದಿರಬಹುದಷ್ಟೇ. ಆದರೆ, ಎರಡು ನಿಮಿಷದ ಅಂತರದಲ್ಲಿ ಇಷ್ಟೇಲ್ಲ ನಡೆಯಿತು. ಯಾವ ಉದ್ದೇಶಕ್ಕೆ ಬಂದರು? ಯಾಕೆ ಹೊಡೆದರು? ಹಲ್ಲೆ ಮಾಡಿದ ತಕ್ಷಣ ಅಲ್ಲಿಂದ ಯಾಕೆ ಪರಾರಿಯಾದರು? ಇದ್ಯಾವುದು ನನಗೆ ಗೊತ್ತಿಲ್ಲ. ಆದರೆ, ಇದಿಷ್ಟು ನಿನ್ನೆ ರಾತ್ರಿ ನಡೆಯಿತು ಎಂದು ಕಿರಿಕ್ ಕೀರ್ತಿ ವಿವರಿಸಿದರು. (ದಿಗ್ವಿಜಯ ನ್ಯೂಸ್)
ಅನುಮತಿ ಇಲ್ಲದೆ ಫೋಟೋ ಯಾಕೆ ತೆಗೆದೆ? ಪಬ್ನಲ್ಲಿ ಕಿರಿಕ್ ಕೀರ್ತಿಯ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ
11ನೇ ಮದ್ವೆಯಾಗಲು ಈಕೆಗೆ ಗಂಡು ಬೇಕಂತೆ! ಜೀವನದಲ್ಲಿ ಥ್ರಿಲ್ ಬೇಕು ಅನ್ನೋ ಈಕೆ ಕೊಟ್ಟ ಕಾರಣ ಕೇಳಿ…
ನನಗೇಕೆ ಜನ್ಮ ನೀಡಿದೆ? ನಾನು ಹುಟ್ಟಲೇಬಾರದಿತ್ತು… ಎನ್ನುತ್ತಾ ತಾಯಿಯ ವೈದ್ಯರ ವಿರುದ್ಧ ಕೇಸ್ ಹಾಕಿ ಗೆದ್ದ ಯುವತಿ!