ನವದೆಹಲಿ: ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಸಹಿತ ಭಾರತದಲ್ಲಿ ನಿಗದಿಯಾಗಿರುವ ಮುಂಬರುವ ಎಲ್ಲ ಐಸಿಸಿ ಟೂರ್ನಿಗಳಿಂದ ಹಿಂದೆ ಸರಿಯುವ ಬಗ್ಗೆಯ ಪರೋಕ್ಷ ಬೆದರಿಕೆ ಒಡ್ಡಿರುವ ಪಾಕಿಸ್ತಾನಕ್ಕೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ.
ಇಂದು (ಅ.20) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಠಾಕೂರ್, ಕ್ರಿಕೆಟ್ಗೆ ಭಾರತ ನೀಡಿರುವ ಕೊಡುಗೆಯನ್ನು ನಿರ್ಲಕ್ಷಿಸುವಂತಿಲ್ಲ. ಕ್ರೀಡಾ ಕ್ಷೇತ್ರಕ್ಕೆ ಭಾರತ ಸಾಕಷ್ಟು ನೆರವು ನೀಡಿದೆ. ಯಾವುದೇ ಆಟವಿರಲಿ ಭಾರತವನ್ನು ಕಡೆಗಣಿಸುವಂತಿಲ್ಲ ಮತ್ತು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಎಲ್ಲ ತಂಡಗಳು ಭಾಗವಹಿಸಲಿವೆ. ಇದೊಂದು ಅದ್ಧೂರಿ ಮತ್ತು ಐತಿಹಾಸಿಕ ಟೂರ್ನಿಯಾಗಿರಲಿದೆ. ಪಾಕಿಸ್ತಾನದ ಭದ್ರತಾ ಕಾಳಜಿ ವಿಚಾರವನ್ನು ಕೇಂದ್ರದ ಗೃಹ ಸಚಿವಾಲಯ ನಿರ್ಧರಿಸಲಿದೆ ಎಂದರು.
ಪಾಕ್ ಹೊಸ ಕ್ಯಾತೆ ತೆಗೆದಿದ್ದೇಕೆ?
ಮುಂಬೈನಲ್ಲಿ ಮಂಗಳವಾರ ನಡೆದ ಬಿಸಿಸಿಐ ಎಜಿಎಂ ಬಳಿಕ ಮಾತನಾಡಿದ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಕಳುಹಿಸುವುದಿಲ್ಲ. ಹೀಗಾಗಿ ಟೂರ್ನಿ ಸ್ಥಳಾಂತರಿಸಲಾಗುವುದು ಎಂದಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೊಸ ತಗಾದೆ ತೆಗೆದಿದೆ. ಈ ವಿಚಾರದ ಚರ್ಚೆಗೆ ತುರ್ತಾಗಿ ಎಸಿಸಿ ಸಭೆ ಕರೆಯಬೇಕೆಂದು ಮನವಿ ಸಲ್ಲಿಸಿದೆ. ಅಲ್ಲದೆ, 2023ರ ವಿಶ್ವಕಪ್ ಸಹಿತ ಭಾರತದಲ್ಲಿ ನಿಗದಿಯಾಗಿರುವ ಮುಂಬರುವ ಎಲ್ಲ ಐಸಿಸಿ ಟೂರ್ನಿಗಳಿಂದ ಹಿಂದೆ ಸರಿಯುವ ಬಗ್ಗೆಯೂ ಪರೋಕ್ಷ ಬೆದರಿಕೆ ಒಡ್ಡಿದೆ.
ಜಯ್ ಷಾ ನೀಡಿರುವ ಹೇಳಿಕೆ ಏಷ್ಯಾ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯದಲ್ಲಿ ಬಿರುಕು ಮೂಡಿಸುವಂಥ ಹೇಳಿಕೆ ಎಂದೂ ಪಿಸಿಬಿ ಅಭಿಪ್ರಾಯ ವ್ಯಕ್ತಪಡಿಸಿದೆ. ಏಷ್ಯಾಕಪ್ ಆಡಲು ಭಾರತ ತಂಡ ಬರದಿದ್ದರೆ, 2023ರ ವಿಶ್ವಕಪ್ ಜತೆಗೆ 2024-31ರ ಅವಧಿಯಲ್ಲಿ ಭಾರತದಲ್ಲಿ ನಡೆಯಲಿರುವ ಎಲ್ಲ ಐಸಿಸಿ ಟೂರ್ನಿಗಳ ಮೇಲೂ ಅದು ಪರಿಣಾಮ ಬೀರಲಿದೆ ಎಂದು ಪಿಸಿಬಿ ಹೇಳಿದೆ. (ಏಜೆನ್ಸೀಸ್)
ಕೆಲಸದಿಂದ ತೆಗೆದಿದ್ದಕ್ಕೆ ಬಸ್ನ ಡಿಸ್ಪ್ಲೇ ಬೋರ್ಡ್ನಲ್ಲಿ ಮಾಲೀಕನ ವಿರುದ್ಧ ಕೆಟ್ಟದಾಗಿ ಬರೆದ ಕಂಡಕ್ಟರ್!
ಈ ಊರಲ್ಲಿ ಹಾಲು-ಮೊಸರು ಉಚಿತ! ಅಪ್ಪಿತಪ್ಪಿ ಮಾರಾಟ ಮಾಡಿದ್ರೆ ಎದುರಾಗುತ್ತೆ ಭಾರಿ ಗಂಡಾಂತರ