ಹೈದರಾಬಾದ್: ಕಾಲೇಜಿನಿಂದ ನಾಪತ್ತೆಯಾಗಿದ್ದ ಬಿ.ಟೆಕ್ ಮೊದಲ ವರ್ಷದ ವಿದ್ಯಾರ್ಥಿನಿಯನ್ನು ಆಕೆಯ ಇನ್ಸ್ಟಾಗ್ರಾಂ ಖಾತೆಯ ನೆರವಿನಿಂದ ಸುಲಭವಾಗಿ ಪತ್ತೆಹಚ್ಚಿರುವ ಘಟನೆ ಹೈದರಾಬಾದ್ನಲ್ಲಿ ವರದಿಯಾಗಿದೆ.
ಸಕಿರೆಡ್ಡಿ ವರ್ಷಿಣಿ ಎಂಬಾಕೆ ಹೈದರಾಬಾದ್ ನಗರಕ್ಕೆ ಹತ್ತಿರ ಇರುವ ಮೇಡ್ಚಲ್ ಜಿಲ್ಲೆಯ ಕೊಂಡ್ಲಕೊಯಾ ನಗರದಲ್ಲಿರುವ ಸಿಎಂಆರ್ ಟೆಕ್ನಿಕಲ್ ಕ್ಯಾಂಪಸ್ನ ಬಿ.ಟೆಕ್ ವಿದ್ಯಾರ್ಥಿನಿ. ಈಕೆ ಜುಲೈ 7ರಂದು ತಮ್ಮ ಸಂಬಂಧಿ ವಂಶಿ ಮೋಹನ್ ರೆಡ್ಡಿ ಎಂಬುವರ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳಿದ್ದರು. ಇದಾದ ಬೆನ್ನಲ್ಲೇ ಐಡಿ ಕಾರ್ಡ್ ಮತ್ತು ಫೋನ್ ಮರೆತು ಬಂದಿರುವುದಾಗಿ ಹೇಳಿ ಬೆಳಗ್ಗೆ 10 ಗಂಟೆಗೆ ಕಾಲೇಜಿನಿಂದ ಹೊರಗಡೆ ಬಂದ ವರ್ಷಿಣಿ ಅಂದಿನಿಂದ ನಾಪತ್ತೆಯಾಗಿದ್ದಳು.
ಮಗಳು ಇಡೀ ದಿನ ಮನೆಗೆ ಮರಳದಿದ್ದನ್ನು ಕಂಡು ಗಾಬರಿಗೊಂಡ ವರ್ಷಿಣಿ ತಂದೆ ಶಿವಾಜಿ, ತಕ್ಷಣ ಪೊಲೀಸ್ ಠಾಣೆಗೆ ತೆರಳಿದರು. ಪ್ರತಿದಿನ ಕಾಲೇಜಿಗೆ ತೆರಳುವಾಗ ಆಕೆ ತನ್ನ ಫೋನ್ ಅನ್ನು ಒಯ್ಯುತ್ತಿರಲಿಲ್ಲ ಮತ್ತು ಅವಳ ಬಳಿ ಹಣವೂ ಇರಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿ, ನಾಪತ್ತೆ ಪ್ರಕರಣವನ್ನು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖೆಗೆ ಇಳಿದ ಪೊಲೀಸರು ಆಕೆಯ ಕಾಲೇಜಿನ ಬಳಿ ಇರುವ ಬೇಕರಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಆಕೆ ತನ್ನ ಬ್ಯಾಗ್ನೊಂದಿಗೆ ಕಾಲೇಜಿನಿಂದ ಹೊರ ಹೋಗಿರುವುದು ಪೊಲೀಸರಿಗೆ ತಿಳಿಯಿತು. ಆದರೆ, ಪೊಲೀಸರಿಗೆ ಈ ಸುಳಿವು ಸಾಕಾಗಲಿಲ್ಲ.
ಶನಿವಾರ ಬೆಳಗ್ಗೆ ವರ್ಷಿಣಿಯ ಕಿರಿಯ ಸಹೋದರಿ, ತನ್ನ ಮೊಬೈಲ್ನ ಈಮೇಲ್ನಲ್ಲಿ ಎಚ್ಚರಿಕೆ ಸಂದೇಶವೊಂದನ್ನು ಸ್ವೀಕರಿಸಿದಳು. ಏಕೆಂದರೆ, ವರ್ಷಿಣಿ ಬಳಿಯಿದ್ದ ಫೋನ್ ತಂಗಿಯ ಈಮೇಲ್ ಅಡ್ರೆಸ್ನಿಂದ ರಿಜಿಸ್ಟರ್ ಆಗಿತ್ತು. ಮುಂಬೈನಲ್ಲಿ ಬೇರೆ ಸಾಧನದಿಂದ ಬೇರೊಬ್ಬ ವ್ಯಕ್ತಿ ಇನ್ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗಿದ್ದಾರೆ ಎಂಬ ಸಂದೇಶ ಅದಾಗಿತ್ತು. ಇದರ ಸುಳಿವು ಪಡೆದುಕೊಂಡು ಸ್ಥಳೀಯ ಪೊಲೀಸರು ಮುಂಬೈ ಪೊಲೀಸರನ್ನು ಸಂಪರ್ಕಿಸಿದರು.
ಇನ್ಸ್ಟಾಗ್ರಾಂ ಆಕ್ಟಿವೇಟ್ ಆಗಿರುವ ಜಾಡನ್ನು ಹಿಡಿದು ಮುಂಬೈ ಪೊಲೀಸರು ಕಾರ್ಯಾಚರಣೆಗೆ ಇಳಿದಾಗ ವರ್ಷಿಣಿ ಕಲ್ಯಾಣ್ ದುರ್ಗ ರೈಲು ನಿಲ್ದಾಣದ ಪತ್ತೆಯಾದಳು. ಈ ವೇಳೆ ಮಾತನಾಡಿದ ವರ್ಷಿಣಿ, ಹೈದರಾಬಾದ್ನಿಂದ ಬಂದಿರುವುದು ಹೇಳಿದಳು. ತಕ್ಷಣ ಆಕೆಯ ಬಗ್ಗೆ ಮೇಡ್ಚಲ್ ಪೊಲೀಸರಿಗೆ ಮುಂಬೈ ಪೊಲೀಸರು ತಿಳಿಸಿದರು. ಈ ವಿಚಾರ ಆಕೆಯ ಪಾಲಕರಿಗೂ ತಿಳಿದು ನಿಟ್ಟುಸಿರು ಬಿಟ್ಟರು. ಕಿಡ್ನಾಪ್ ಅಥವಾ ಮಾನವ ಕಳ್ಳಸಾಗಾಣೆ ಆಗಿರಬಹುದೆಂದು ಪಾಲಕರು ಹೆದರಿದ್ದರು. ವಿಶೇಷ ಪೊಲೀಸ್ ತಂಡ ಮುಂಬೈಗೆ ತೆರಳಿ ವರ್ಷಿಣಿಯನ್ನು ಮರಳಿ ಹೈದರಾಬಾದ್ಗೆ ಕರೆತಂದಿದೆ. ಆಕೆ ಮನೆ ಬಿಟ್ಟು ಹೋಗಲು ಕಾರಣ ಏನು ಎಂಬುದನ್ನು ತಿಳಿಯಲು ಪೊಲೀಸರು ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್)
ದೇಶದ ಅತಿ ಕಿರಿಯ ಮೇಯರ್ ವರಿಸಲಿದ್ದಾರೆ ರಾಜ್ಯದ ಅತಿ ಕಿರಿಯ MLA! ಸೆ.4ಕ್ಕೆ ಅಪರೂಪದ ಮದ್ವೆಗೆ ಕೇರಳ ಸಾಕ್ಷಿ
ಸೇತುವೆಗೆ ಡಿಕ್ಕಿ ಹೊಡೆದು ಕಾರು ಹೊಳೆಗೆ ಬಿದ್ದ ಪ್ರಕರಣ: 400 ಮೀ. ದೂರದಲ್ಲಿ ಯುವಕನೊಬ್ಬನ ಮೃತದೇಹ ಪತ್ತೆ
ತೆಲಂಗಾಣದಲ್ಲಿ ಮೀನಿನ ಮಳೆ ಕಂಡು ಹೌಹಾರಿದ ಜನರು! ಈ ಮೀನುಗಳು ತಿನ್ನಲು ಯೋಗ್ಯವೇ? ಇಲ್ಲಿದೆ ಉತ್ತರ…