ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಆಮ್ ಆದ್ಮಿ ಪಕ್ಷ (ಎಎಪಿ) ಮೊದಲ ಬಾರಿಗೆ ಪಂಜಾಬ್ ಅಧಿಕಾರದ ಚುಕ್ಕಾಣಿ ಹಿಡಿದ್ದಿದ್ದು, ಪಕ್ಷದ 10 ಶಾಸಕರು ಇಂದು (ಮಾ.19) ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಿಎಂ ಭಗವಂತ್ ಮಾನ್ ನೇತೃತ್ವದಲ್ಲಿ ಇಂದು ಸಂಜೆ ಮೊದಲ ಸಚಿವ ಸಂಪುಟ ಸಭೆ ನಡೆಯಲಿದೆ. ಬೆಳಗ್ಗೆ 11.30ರ ಸುಮಾರಿಗೆ 10 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಹೊಸ ಸಚಿವರ ಪಟ್ಟಿ ಈ ಕೆಳಕಂಡಂತಿದೆ.
1. ಹರ್ಪಾಲ್ ಸಿಂಗ್ ಚೀಮಾ: ಹರ್ಪಾಲ್ ಸಿಂಗ್ ಚೀಮಾ ಅವರು ದಿರ್ಬಾದಿಂದ ಶಾಸಕರಾಗಿ ಮರು ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಾರಂಭದಿಂದಲೂ ಎಎಪಿ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಮತ್ತು ಪಕ್ಷದಲ್ಲಿ ಪ್ರಮುಖ ದಲಿತ ನಾಯಕ ಎಂದು ಪರಿಗಣಿಸಲಾಗಿದೆ.
2. ಡಾ. ಬಲ್ಜಿತ್ ಕೌರ್: ಡಾ ಬಲ್ಜಿತ್ ಕೌರ್ ಅವರು ಎಎಪಿ ಮಾಜಿ ಸಂಸದ ಸಾಧು ಸಿಂಗ್ ಅವರ ಪುತ್ರಿ. ಅವರು ಮಾಲೌಟ್ ಕ್ಷೇತ್ರದ ಶಾಸಕಿ. ಆಕೆ ನೇತ್ರ ತಜ್ಞೆಯಾಗಿದ್ದಾರೆ.
3. ಹರ್ಭಜನ್ ಸಿಂಗ್ ಇಟಿಒ: ಇವರು ಜಂದಿಯಾಲ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 2017ರಲ್ಲಿ ಎಎಪಿ ಅನ್ನು ಸೇರಿದರು. ಮಾಜಿ ಅಬಕಾರಿ ಮತ್ತು ತೆರಿಗೆ ಅಧಿಕಾರಿಯಾಗಿರುವ ಹರ್ಭಜನ್ ಸಿಂಗ್ ಅವರು ರಾಜಕೀಯ ಸೇರಲು ಸ್ವಯಂ ನಿವೃತ್ತಿ ಪಡೆದುಕೊಂಡರು.
4. ಡಾ. ವಿಜಯ್ ಸಿಂಗ್ಲ: ವೃತ್ತಿಯಲ್ಲಿ ದಂತವೈದ್ಯರಾಗಿರುವ ವಿಜಯ್ ಸಿಂಗ್ಲಾ ಅವರು ಖ್ಯಾತ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿಧು ಮೂಸೆವಾಲಾ ಅವರನ್ನು ಸೋಲಿಸಿ ಮಾನ್ಸಾದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
5. ಲಾಲ್ ಚಂದ್ ಕಟರುಚಕ್: ಇವರು ಭೋವಾ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಜೋಗಿಂದರ್ ಪಾಲ್ ಅವರನ್ನು ಸೋಲಿಸಿದ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ.
6. ಗುರ್ಮಿತ್ ಸಿಂಗ್ ಮೀಟ್ ಹೆಯರ್: ಬರ್ನಾಲಾ ಕ್ಷೇತ್ರದಿಂದ ಆಯ್ಕೆಯಾದ 32 ವರ್ಷದ ಶಾಸಕ ಇವರು. ಮೊದಲು ಅಣ್ಣಾ ಹಜಾರೆ ಅವರ ಚಳವಳಿಗೆ ಸೇರಿದರು ಮತ್ತು ನಂತರ ಎಎಪಿ ಸೇರಿದರು.
7. ಕಲದೀಪ್ ಸಿಂಗ್ ಧಲಿವಾಲ್: ಇವರು ಅಜ್ನಾಲಾ ಕ್ಷೇತ್ರದ ಶಾಸಕ. ಇವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಏಳು ವರ್ಷಗಳ ಹಿಂದೆ ಎಎಪಿ ಸೇರಿದ್ದರು. 2017ರಲ್ಲಿ ಪಕ್ಷದ ಟಿಕೆಟ್ ಸಿಗಲಿಲ್ಲ. 2019 ರ ಚುನಾವಣೆಯಲ್ಲಿ ಅವರು ಗುರುದೀಪ್ ಔಜ್ಲಾ ವಿರುದ್ಧ ಸ್ಪರ್ಧಿಸಿದರು ಆದರೆ ಸೋತರು.
8. ಲಾಲ್ಜಿತ್ ಸಿಂಗ್ ಭುಲ್ಲರ್: ಪಟ್ಟಿ ಕ್ಷೇತ್ರದಲ್ಲಿರುವ ಧಾನ್ಯ ಮಾರುಕಟ್ಟೆಯಲ್ಲಿ ಇವರು ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು. ಚುನಾವಣೆಯಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರ ಅಳಿಯ ಪ್ರತಾಪ್ ಸಿಂಗ್ ಕೈರಾನ್ ಅವರನ್ನು ಸೋಲಿಸಿ, ಇದೀಗ ಶಾಸಕರಾಗಿ ಆಯ್ಕೆಯಾಗಿದ್ದಾರೆ.
9. ಬ್ರಾಮ್ ಶಂಕರ್ (ಜಿಂಪಾ): 25 ವರ್ಷಗಳಿಂದ ಕೌನ್ಸಿಲರ್ ಆಗಿರುವ ಬ್ರಾಮ್ ಶಂಕರ್ ಅವರು ವಿದ್ಯಾರ್ಥಿ ದಿನಗಳಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರು ಹೊಶಿಯಾರ್ಪುರದಲ್ಲಿ ಸಚಿವ ಸುಂದರ್ ಶ್ಯಾಮ್ ಅರೋರಾ ಅವರನ್ನು ಸೋಲಿಸಿದ್ದಾರೆ.
10. ಹರ್ಜೊತ್ ಸಿಂಗ್ ಬೈನ್ಸ್: ಇವರು ಶ್ರೀ ಆನಂದಪುರ ಸಾಹಿಬ್ನಿಂದ ಪಂಜಾಬ್ ಅಸೆಂಬ್ಲಿ ಸ್ಪೀಕರ್ ರಾಣಾ ಕೆಪಿ ಸಿಂಗ್ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಎಎಪಿ ಯುವ ಘಟಕದ ಮುಖ್ಯಸ್ಥರಾಗಿದ್ದಾರೆ ಮತ್ತು ಅರ್ಹ ವಕೀಲರೂ ಆಗಿದ್ದಾರೆ.
ಪ್ರಮಾಣ ವಚನ ಕಾರ್ಯಕ್ರಮ ಪಂಜಾಬ್ ರಾಜಧಾನಿ ಚಂಡೀಗಢದ ರಾಜಭವನದಲ್ಲಿ ನಡೆಯಿತು. ಪಂಜಾಬ್ ಕ್ಯಾಬಿನೆಟ್ನಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಟ್ಟು 18 ಮಂತ್ರಿಗಳನ್ನು ಹೊಂದಬಹುದು. ಹೀಗಾಗಿ ರಾಜ್ಯ ಸರ್ಕಾರವು ತನ್ನ ಸಚಿವ ಸಂಪುಟವನ್ನು ವಿಸ್ತರಿಸಲು ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಸದಸ್ಯರನ್ನು ಸೇರಿಸಿಕೊಳ್ಳಲಿದೆ.
ಮಾನ್ ಸಂದೇಶ
ಶುಕ್ರವಾರ ಟ್ವಿಟರ್ ಮೂಲಕ ತಮ್ಮ ಸಚಿವರ ಪಟ್ಟಿಯನ್ನು ಪ್ರಕಟಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್, ನೂತನ ಸಚಿವರಿಗೆ ಅಭಿನಂದಿಸಿದ್ದಾರೆ ಮತ್ತು ಪಂಜಾಬ್ಗೆ ಪ್ರಾಮಾಣಿಕ ಸರ್ಕಾರವನ್ನು ನೀಡಲು ಸಂಪುಟವು ಹಗಲಿರುಳು ಶ್ರಮಿಸಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)
Chandigarh | AAP leaders Lal Chand Kataruchak, Gurmeet Singh Meet Hayer, Kuldeep Singh Dhaliwal, Laljit Singh Bhullar take oath as ministers in the Punjab cabinet. pic.twitter.com/RNzhw0PpYO
— ANI (@ANI) March 19, 2022
Chandigarh | AAP leaders Brahm Shankar Jimpa and Harjot Singh Bains take oath as ministers in the Punjab cabinet. pic.twitter.com/tnnD9yYk5V
— ANI (@ANI) March 19, 2022
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತು ಶಾಕಿಂಗ್ ಕಾಮೆಂಟ್: ವೈರಲ್ ಆಗ್ತಿದೆ ಪ್ರಕಾಶ್ ರಾಜ್ ಟ್ವೀಟ್
ಸಮಂತಾಗೆ ಏನಾಯ್ತು? ಯಾಕಿಂಗೆ ಆಡ್ತಿದ್ದಾರೆ? ಹೀಗೆ ಮುಂದುವರಿದ್ರೆ ಗೌರವಕ್ಕೆ ಧಕ್ಕೆ ಖಂಡಿತ ಅಂತಿದ್ದಾರೆ ಇವರು…
ಬಾಳು ಕೊಡ್ತೀನಿ, ನೀನೇ ನನ್ನ ಜೀವ ಎಂದು ಅರ್ಧದಲ್ಲೇ ಕೈ ಕೊಟ್ಟ ಕಿರಾತಕ: ಗಂಡನಿಗಾಗಿ ಧರಣಿ ಕುಳಿತ ಶಿಕ್ಷಕಿ