More

    ಫಲಾನುಭವಿಗಳಿಗೆ ಮನೆ ಶೀಘ್ರ ಹಸ್ತಾಂತರ

    ಚಿಕ್ಕಮಗಳೂರು: ನಗರದ ಉಪ್ಪಳ್ಳಿ ಸಮೀಪದ ವಾಜಪೇಯಿ ಬಡಾವಣೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ 107 ಕೋಟಿ ರೂ. ವೆಚ್ಚದಲ್ಲಿ ವಸತಿ ರಹಿತರಿಗೆ ನಿರ್ಮಿಸುತ್ತಿರುವ 1511 ಜಿ+2 ಮನೆಗಳ ಪೈಕಿ ಮುಂದಿನ ತಿಂಗಳು 300 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಬೇಕಿದ್ದು, ಕಾಮಗಾರಿ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ಸೂಚಿಸಿದರು.

    ಅಧಿಕಾರಿಗಳೊಂದಿಗೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ವಸತಿ ರಹಿತರಿಗೆ 1511 ಮನೆಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಒಂದು ಮನೆಗೆ ಮೂಲ ಸೌಕರ್ಯ ವೆಚ್ಚ ಸೇರಿ 7.50 ಲಕ್ಷ ರೂ. ವೆಚ್ಚವಾಗಲಿದೆ ಎಂದರು.
    ಗ್ರಾಮೀಣ ಭಾಗದಲ್ಲಿ ವಸತಿ ರಹಿತರಿಗೆ ಸೂರು, ನಿವೇಶನ ಒದಗಿಸಲು ಈಗಾಗಲೇ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ನನ್ನ ಕ್ಷೇತ್ರದಲ್ಲಿ 100 ಎಕರೆ ಜಾಗ ಗುರುತಿಸಿದ್ದು, ಇದರಲ್ಲಿ 50 ಎಕರೆ ತಕರಾರಿಲ್ಲ. ಉಳಿದ 50 ಎಕರೆ ಡೀಮ್ಡ್ ಅರಣ್ಯ ಎಂದು ಹೇಳಲಾಗಿದೆ. ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ನಿವಾರಣೆಗೆ ಜಂಟಿ ಸರ್ವೇ ಮಾಡಲು ಈಗಾಗಲೇ 15 ಭೂಮಾಪಕರನ್ನು ನೇಮಿಸಿದೆ ಎಂದರು.
    ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಫಲಾನುಭವಿಯೇ 3 ಲಕ್ಷ ರೂ. ಭರಿಸುವಂತೆ ನಿಗದಿಮಾಡಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರ 2 ಲಕ್ಷ ರೂ. ಭರಿಸಲಿದ್ದು, ಫಲಾನುಭವಿ 1 ಲಕ್ಷ ರೂ. ಮಾತ್ರ ನೀಡುವಂತೆ ಮಾಡಿದೆ. ಇದಕ್ಕೂ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲಾಗಿದೆ. ಮನೆಯಲ್ಲಿ ಒಂದು ಬೆಡ್ ರೂಂ, ಹಾಲ್, ಕಿಚನ್, ಶೌಚಗೃಹ ಸೌಲಭ್ಯ ಇರುತ್ತದೆ. ಫೆಬ್ರವರಿಯಲ್ಲಿ 300 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸುವರು ಎಂದು ಮಾಹಿತಿ ನೀಡಿದರು.
    ಕಾಂಗ್ರೆಸ್ ಸರ್ಕಾರ ನೀಡಿದ್ದ ಐದೂ ಭರವಸೆಗಳನ್ನು ಈಡೇರಿಸುತ್ತಿದೆ. ಫೆ.12ರಿಂದ ಯುವ ನಿಧಿ ಫಲಾನುಭವಿಗಳಿಗೆ ಹಣ ಹಾಕಲಾಗುವುದು. ಇದೀಗ ಸರ್ಕಾರ ಅಭಿವೃದ್ಧಿ ಕಾರ್ಯಗಳ ಕಡೆಗೆ ಗಮನಹರಿಸುತ್ತಿದೆ. ಜಿಲ್ಲೆಯ 5 ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದೆ. ಚಿಕ್ಕಮಗಳೂರು ಕ್ಷೇತ್ರದ ಸಖರಾಯಪಟ್ಟಣ ರಸ್ತೆಗೆ 25 ಕೋಟಿ ರೂ. ಮಂಜೂರು ಮಾಡಿದೆ. ಹಿಂದಿನ ಸರ್ಕಾರದಲ್ಲಿ ಅಪೂರ್ಣವಾಗಿದ್ದ ಕಾಮಗಾರಿಗಳಿಗೂ ಚಾಲನೆ ದೊರೆಯಲಿದೆ. ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು.
    ರಾಜೀವ್ ಗಾಂಧಿ ವಸತಿ ಅಭಿವೃದ್ಧಿ ನಿಗಮದ ಎಜಿಎಂ ಪ್ರಕಾಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಪೌರಾಯುಕ್ತ ಬಿ.ಸಿ.ಬಸವರಾಜು, ಯೋಜನಾ ನಿರ್ದೇಶಕಿ ನಾಗರತ್ನಾ, ನಗರಸಭೆ ಅಧಿಕಾರಿಗಳಾದ ಇಂಜಿನಿಯರ್ ರಶ್ಮಿ, ಮಿಥುನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts